ADVERTISEMENT

ಸಾಂಸ್ಕೃತಿಕ ಮುನ್ನೋಟ: 7ಕ್ಕೆ ‘ಬ್ರಹ್ಮ ಕಪಾಲ’ ಯಕ್ಷಗಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 23:10 IST
Last Updated 3 ಸೆಪ್ಟೆಂಬರ್ 2025, 23:10 IST
<div class="paragraphs"><p>ಯಕ್ಷಗಾನ</p></div>

ಯಕ್ಷಗಾನ

   

ಬೆಂಗಳೂರು: ಯಕ್ಷರಥ ಸರ್ವಸದಸ್ಯರು ‘ಯಕ್ಷ ವಲ್ಲರಿ’ ಶೀರ್ಷಿಕೆಯಡಿ ಮಹಿಳಾ ಮುಮ್ಮೇಳ ಕಲಾವಿದರು ಮತ್ತು ಅತಿಥಿ ಕಲಾವಿದರಿಂದ ಇದೇ 7ರಂದು ಸಂಜೆ 4 ಗಂಟೆಗೆ ನಂದಿನಿ ಬಡಾವಣೆಯ ಉತ್ತರ ಕನ್ನಡ ಸಂಘದಲ್ಲಿ ‘ಬ್ರಹ್ಮ ಕಪಾಲ’ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದ್ದಾರೆ. 

ಕಲಾವಿದೆ ಅರ್ಪಿತಾ ಹೆಗಡೆ ನೇತೃತ್ವದಲ್ಲಿ ಈ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ಸುಬ್ರಾಯ ಹೆಬ್ಬಾರ, ಅಕ್ಷಯ್ ಆಚಾರ್, ಶ್ರೀನಿವಾಸ ಪ್ರಭು ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಕಿರಣ ಪೈ, ಅರ್ಪಿತಾ ಹೆಗಡೆ, ಪ್ರಿಯಾಂಕ, ಸಿಂಧೂಶ್ರೀ ಹೆಬ್ಬಾರ್, ಸುಖದಾ ಭಟ್, ಶ್ರಾವ್ಯ ದೊಡ್ಡೇರಿ, ಗೀತಾ ಹೆಗಡೆ, ಅಶ್ವಿನಿ ಕೊಂಡದಕುಳಿ, ನಿಹಾರಿಕಾ ಭಟ್, ಚಿತ್ಕಲಾ ತುಂಗಾ ಹಾಗೂ ಶ್ರೇಯಾ ದೊಡ್ಡೇರಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ADVERTISEMENT

**

ಸಪ್ತಕದಿಂದ ಸಂಗೀತ ಸಂಭ್ರಮ

ಬೆಂಗಳೂರು: ಸಪ್ತಕ ಸಂಸ್ಥೆಯು ಇದೇ 7ರಂದು ಸಂಜೆ 5.30ಕ್ಕೆ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ‘ಸಂಗೀತ ಸಂಭ್ರಮ’ ಕಾರ್ಯಕ್ರಮ ಹಮ್ಮಿಕೊಂಡಿದೆ. 

ನವದೆಹಲಿಯ ಸಾಜನ್ ಮಿಶ್ರಾ ಮತ್ತು ಸ್ವರಾಂಶ ಮಿಶ್ರಾ ಅವರಿಂದ ಗಾಯನ ನಡೆಯಲಿದ್ದು, ರವೀಂದ್ರ ಯಾವಗಲ್ (ತಬಲಾ), ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ) ಅವರು ಸಾಥ್ ನೀಡಲಿದ್ದಾರೆ. ಮುಂಬೈನ ನಯನ ಘೋಷ್ ಅವರಿಂದ ಸಿತಾರ್ ವಾದನ ನಡೆಯಲಿದ್ದು, ತಬಲಾದಲ್ಲಿ ಇಶಾನ್ ಘೋಷ್ ಸಾಥ್ ನೀಡಲಿದ್ದಾರೆ. 

ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ ಇರಲಿದೆ ಎಂದು ಸಂಸ್ಥೆ ತಿಳಿಸಿದೆ. 

**

‘ಫಡ್ನೀಸ್ 100’ ವ್ಯಂಗ್ಯಚಿತ್ರ ಪ್ರದರ್ಶನ

ಬೆಂಗಳೂರು: ವ್ಯಂಗ್ಯಚಿತ್ರಕಾರ ಎಸ್.ಡಿ. ಫಡ್ನೀಸ್ ಅವರ ನೂರನೇ ಜನ್ಮದಿನದ ಪ್ರಯುಕ್ತ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ‘ಫಡ್ನೀಸ್ 100’ ಶೀರ್ಷಿಕೆಯಡಿ ಇದೇ 6ರಿಂದ ಎಂ.ಜಿ ರಸ್ತೆಯ ಮಿಡ್ ಫೋರ್ಡ್ ಹೌಸ್‌ನ ತನ್ನ ಗ್ಯಾಲರಿಯಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ. 

ಭಾನುವಾರ ಮತ್ತು ಸಾರ್ವಜನಿಕ ರಜಾ ದಿನ ಹೊರತುಪಡಿಸಿ, ಇದೇ 16ರವರೆಗೂ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಈ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನವನ್ನು ಲೋಕಸಭೆಯ ಮಾಜಿ ಸದಸ್ಯ ಜನಾರ್ದನ ಸ್ವಾಮಿ ಉದ್ಘಾಟಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. 

**

6ಕ್ಕೆ ವಿಶೇಷ ಸಂಗೀತ ಕಛೇರಿ

ಬೆಂಗಳೂರು: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್ 88ನೇ ಗಣೇಶೋತ್ಸವದ ಪ್ರಯುಕ್ತ ಇದೇ 6ರಂದು ಸಂಜೆ 6 ಗಂಟೆಗೆ ಚಾಮರಾಜಪೇಟೆಯಲ್ಲಿರುವ ತನ್ನ ಕೇಂದ್ರದ ಆವರಣದಲ್ಲಿ ವಿಶೇಷ ಸಂಗೀತ ಕಛೇರಿ ಹಮ್ಮಿಕೊಂಡಿದೆ. 

ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಅವರಿಂದ ಗಾಯನದ ಜುಗಲ್‌ಬಂದಿ ನಡೆಯಲಿದೆ. ಎಸ್. ಜನಾರ್ದನ್ (ಪಿಟೀಲು), ಫಣೀಂದ್ರ ಭಾಸ್ಕರ್ (ಮೃದಂಗ) ಹಾಗೂ ಸುಕನ್ಯಾ ರಾಮ್‌ಗೋಪಾಲ್ (ಘಟ) ಅವರು ಸಾಥ್ ನೀಡಲಿದ್ದಾರೆ. ರಾತ್ರಿ 8.30ಕ್ಕೆ ಮಹಾಮಂಗಳಾರತಿ ಮತ್ತು ಗಣಪತಿ ಮೂರ್ತಿ ವಿಸರ್ಜನೆ ನಡೆಯಲಿದೆ. 

**

‘ಮೂರನೇ ಕಿವಿ’ ನಾಟಕ ಪ್ರದರ್ಶನ 6ಕ್ಕೆ 

ಬೆಂಗಳೂರು: ಮೈಸೂರಿನ ಪರಿವರ್ತನ ರಂಗ ಸಮಾಜ ತಂಡವು ಸೆಪ್ಟೆಂಬರ್ 6ರಂದು ಜೆ.ಪಿ. ನಗರದ ರಂಗಶಂಕರದಲ್ಲಿ ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 7.30ಕ್ಕೆ ‘ಮೂರನೇ ಕಿವಿ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಎಸ್.ಆರ್. ರಮೇಶ್ ಅವರು ಈ ನಾಟಕದ ವಿನ್ಯಾಸ, ರಂಗಪಠ್ಯ ಹಾಗೂ ನಿರ್ದೇಶನ ಮಾಡಿದ್ದಾರೆ.

*** 

ಪ್ರತಿ ಗುರುವಾರ ಪ್ರಕಟವಾಗುವ ‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್‌ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.