ADVERTISEMENT

ತಾಯಿ ಕೊಂದು ಕಥೆ ಕಟ್ಟಿದ್ದ ಪುತ್ರಿ: ಪ್ರಿಯಕರ, ಆತನ ಸ್ನೇಹಿತರ ಜತೆಗೆ ಸೇರಿ ಕೃತ್ಯ

ಪ್ರಿಯಕರ, ಆತನ ಸ್ನೇಹಿತರ ಜತೆಗೆ ಸೇರಿ ಕೃತ್ಯ, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 16:06 IST
Last Updated 31 ಅಕ್ಟೋಬರ್ 2025, 16:06 IST
ಕೊಲೆಯಾದ ನೇತ್ರಾವತಿ 
ಕೊಲೆಯಾದ ನೇತ್ರಾವತಿ    

ಬೆಂಗಳೂರು: ಪ್ರಿಯಕರ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿಕೊಂಡು ತಾಯಿಯನ್ನು ಕೊಂದು ಕಥೆ ಕಟ್ಟಿದ್ದ ಪುತ್ರಿ ಸೇರಿ ಐವರನ್ನು ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಬಾಲಕ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ. 

ಉತ್ತರಹಳ್ಳಿಯ ನಿವಾಸಿ ನೇತ್ರಾವತಿ (34) ಅವರ ಅಸಹಜ ಸಾವು ಪ್ರಕರಣಕ್ಕೆ ಪೊಲೀಸ್ ತನಿಖೆಯಿಂದ ತಿರುವು ಸಿಕ್ಕಿದೆ. 

ನೇತ್ರಾವತಿ ಅವರು ಬ್ಯಾಂಕ್‌ವೊಂದರ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರ 16 ವರ್ಷದ ಪುತ್ರಿ, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತರೇ ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಬಂಧಿತರು 16 ವರ್ಷದೊಳಗಿನವರಾಗಿದ್ದು, ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.  

ADVERTISEMENT

‘ನೇತ್ರಾವತಿ ಅವರ ಪುತ್ರಿ, ಯುವಕನನ್ನು ಪ್ರೀತಿಸುತ್ತಿದ್ದರು. ಪ್ರಿಯಕರ ಹಾಗೂ ಅವನ ಮೂವರು ಸ್ನೇಹಿತರೊಂದಿಗೆ ಮನೆಗೆ ಬಂದಿದ್ದಳು. ರಾತ್ರಿ ವೇಳೆ ನೇತ್ರಾವತಿ ಅವರು ಮಲಗಿದ್ದಾಗ ಬಂದಿದ್ದರು. ಎಚ್ಚರಗೊಂಡಿದ್ದ ನೇತ್ರಾವತಿ ಅವರು ಮಗಳನ್ನು ಪ್ರಶ್ನಿಸಿ ಬೈಯ್ದು ಬುದ್ಧಿಮಾತು ಹೇಳಿದ್ದರು. ರಾತ್ರಿ ವೇಳೆ ಈ ರೀತಿ ಮನೆಗೆ ಯಾರ್‍ಯಾರನ್ನೊ ಕರೆದುಕೊಂಡು ಬಾರದಂತೆ ತಾಕೀತು ಮಾಡಿದ್ದರು. ಪೊಲೀಸರಿಗೆ ತಿಳಿಸುವುದಾಗಿ ಹೇಳಿದ್ದರು. ಆಗ ಗಲಾಟೆ ನಡೆದಿತ್ತು’ ಎಂದು ಪೊಲೀಸರು ಹೇಳಿದರು.

‘ಜಗಳ ವಿಕೋಪಕ್ಕೆ ಹೋದಾಗ ಕೋಪಗೊಂಡಿದ್ದ ಮಗಳು ಹಾಗೂ ಆಕೆಯ ಸ್ನೇಹಿತರು ಬಾಯಿ ಮುಚ್ಚಿ ಟವಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ಬಳಿಕ ಮನೆಯಲ್ಲಿದ್ದ ಫ್ಯಾನ್‌ಗೆ ಮೃತದೇಹವನ್ನು ನೇತುಹಾಕಿ ಆರೋಪಿಗಳು ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

ಕೊಲೆ ರಹಸ್ಯ ಬಯಲಾಗಿದ್ದು ಹೇಗೆ‌?: ಅಂತ್ಯಸಂಸ್ಕಾರಕ್ಕೂ ಪುತ್ರಿ ಬಾರದೇ ಇರುವುದನ್ನು ಕಂಡು ನೇತ್ರಾವತಿ ಅವರ ಸಹೋದರಿ ಅನಿತಾಗೆ ಅನುಮಾನ ಬಂದಿತ್ತು. ಸಹೋದರಿಯ ಪುತ್ರಿ ನಾಪತ್ತೆ ಆಗಿರುವುದಾಗಿ ದೂರು ನೀಡಿದ್ದರು.

ಅ.30ರಂದು ನೇತ್ರಾವತಿ ಪುತ್ರಿ ಮನೆಗೆ ಬಂದಾಗ ಆಕೆಯನ್ನು ಸಂಬಂಧಿಕರು ವಿಚಾರಣೆ ನಡೆಸಿದ್ದರು.

‘ತಾಯಿ ಹಾಗೂ ನಾನು ಮನೆಯಲ್ಲಿರುವಾಗ ಸ್ನೇಹಿತರು ಬಂದಿದ್ದರು. ಸ್ನೇಹಿತರು ಮನೆಗೆ ಬಂದಿರುವ ವಿಚಾರದ ಬಗ್ಗೆ ಪೊಲೀಸರಿಗೆ ಹೇಳುತ್ತೇನೆ ಎಂದು ಹೆದರಿಸಿದ್ದರು. ಅಷ್ಟರಲ್ಲಿ ತಾಯಿಯ ಕುತ್ತಿಗೆಗೆ ಟವಲ್​ನಿಂದ ಬಿಗಿದು ಉಸಿರುಗಟ್ಟಿಸಿದ್ದರು. ನಂತರ, ಸೀರೆಯಿಂದ ಫ್ಯಾನ್​​​ಗೆ ನೇಣು ಹಾಕಿದ್ದರು. ನನಗೂ ಚಾಕು ತೋರಿಸಿ ಈ ವಿಚಾರವನ್ನು ಯಾರಿಗೂ ಹೇಳದಂತೆ ಹೆದರಿಸಿದ್ದರು. ಭಯಗೊಂಡು, ಸ್ನೇಹಿತೆಯ ಮನೆಗೆ ಹೋಗಿದ್ದೆ’ ಎಂದು ಸಂಬಂಧಿಕರ ಬಳಿ ಆರೋಪಿ ಬಾಲಕಿ ಕಥೆ ಕಟ್ಟಿದ್ದಳು.

ಆದರೆ, ಅನಿತಾ ಅವರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಲಕಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.