ADVERTISEMENT

ಬೆಂಗಳೂರು: ಸೆ.24ರಿಂದ ತ್ಯಾಜ್ಯ ವಿಲೇವಾರಿ ಸ್ಥಗಿತ!

ತ್ಯಾಜ್ಯ ಗುತ್ತಿಗೆದಾರರು– ಬಿಎಸ್‌ಡಬ್ಲ್ಯುಎಂಎಲ್‌ ಅಧಿಕಾರಿಗಳ ನಡುವೆ ತಾರಕಕ್ಕೇರಿದ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 16:23 IST
Last Updated 20 ಸೆಪ್ಟೆಂಬರ್ 2025, 16:23 IST
ಕಸ ಸಂಗ್ರಹ, ವಿಲೇವಾರಿ ಸ್ಥಗಿತ
ಕಸ ಸಂಗ್ರಹ, ವಿಲೇವಾರಿ ಸ್ಥಗಿತ   

ಬೆಂಗಳೂರು: ತ್ಯಾಜ್ಯ ಗುತ್ತಿಗೆದಾರರು ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ಅಧಿಕಾರಿಗಳ ನಡುವಿನ ಸಂಘರ್ಷ ಹೆಚ್ಚಾಗಿದ್ದು, ಇದೇ 24ರಿಂದ (ಬುಧವಾರ) ನಗರದಲ್ಲಿ ಕಸ ಸಂಗ್ರಹ, ವಿಲೇವಾರಿ ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

‘4ಜಿ ವಿನಾಯಿತಿ ಕಡಿತ, ಬಿಲ್‌ ಸಲ್ಲಿಸಲು ಮೂರು ತಿಂಗಳಿಗೊಮ್ಮೆ ನಿಯಮ ಬದಲು, ಮಾಸಿಕ ಬಿಲ್‌ ಪಾವತಿಗೆ ಟೇಬಲ್‌ಗಳು ಹೆಚ್ಚಾಗುತ್ತಿವೆ’ ಎಂದು ತ್ಯಾಜ್ಯ ಗುತ್ತಿಗೆದಾರರು ದೂರುತ್ತಿದ್ದಾರೆ. ‘ಏಪ್ರಿಲ್‌ನಿಂದ ದಾಖಲೆ ಸಹಿತ ಬಿಲ್‌ಗಳನ್ನು ಸಲ್ಲಿಸಿಲ್ಲ ಎಂದು’ ಬಿಎಸ್‌ಡಬ್ಲ್ಯುಎಂಎಲ್‌ ಅಧಿಕಾರಿಗಳು ಆರೋಪಿಸುತ್ತಿದ್ದಾರೆ. ಪರಸ್ಪರ ಕುಳಿತು ಚರ್ಚಿಸಿ, ವಿಷಯ ಬಗೆಹರಿಸಿಕೊಳ್ಳದೇ ಇರುವುದರಿಂದ ಸಮಸ್ಯೆ ತಾರಕಕ್ಕೇರಿದೆ. ಹೀಗಾಗಿ, ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರು ತ್ಯಾಜ್ಯ ಗುತ್ತಿಗೆದಾರರು ಬುಧವಾರದಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

‘ಬಿಬಿಎಂಪಿಯಿದ್ದಾಗ ತ್ಯಾಜ್ಯ ಸಂಗ್ರಹ, ವಿಲೇವಾರಿಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರಿಗೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ- (ಕೆಟಿಪಿಪಿ) 1999ರ ಕಲಂ 4(ಜಿ) ಅಡಿಯಲ್ಲಿ ವಿನಾಯಿತಿ ನೀಡಲಾಗಿತ್ತು. ಇದೀಗ, ಬಿಎಸ್‌ಡಬ್ಲ್ಯುಎಂಎಲ್‌ನಿಂದ ಬಿಲ್‌ ಪಾವತಿಸಿದರೆ, ಗುತ್ತಿಗೆದಾರರಿಗೆ ಕಾನೂನು ಸಮಸ್ಯೆ ಉಂಟಾಗುತ್ತದೆ. ಈ ಕಂಪನಿಗೆ 4ಜಿ ವಿನಾಯಿತಿ ಇಲ್ಲ. ಅವರಿಗೆ ಬಿಲ್‌ ಕೊಟ್ಟು ಹಣ ಪಡೆದರೆ ನಮಗೆ ಸಮಸ್ಯೆಯಾಗುತ್ತದೆ. ಇದನ್ನು ಪರಿಹರಿಸಿ ಎಂದರೆ, ಮಾತನಾಡಲೂ ಸಭೆ ಕರೆಯುತ್ತಿಲ್ಲ. ಹೀಗಾಗಿ, ತ್ಯಾಜ್ಯ ಸಂಗ್ರಹ, ವಿಲೇವಾರಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ಬೆಂಗಳೂರು ನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು–ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಬಾಲಸುಬ್ರಮಣಿಯಂ ತಿಳಿಸಿದರು.

ADVERTISEMENT

‘ಬಿಎಸ್‌ಡಬ್ಲ್ಯುಎಂಎಲ್‌ಗೆ ಹೊಸ ಅಧಿಕಾರಿಗಳು ಬಂದಾಗ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಬದಲಿಸುತ್ತಾರೆ. ಇದರಿಂದ ಹಲವು ತೊಂದರೆಯಾಗುತ್ತಿದೆ. ಏಪ್ರಿಲ್‌ನಿಂದ ಮಾಸಿಕ ಬಿಲ್‌ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಮಾಸಿಕ ಬಿಲ್‌ ಪಾವತಿಸಲು ಟೇಬಲ್‌ಗಳು ಹೆಚ್ಚುವರಿಯಾಗಿವೆ. ಇವರು ಬಿಲ್‌ ಪಾವತಿಸದಿದ್ದರೂ, ನಾವು ಇಎಸ್‌ಐ, ಇಪಿಎಫ್‌ ಕಟ್ಟಬೇಕು. ಇಲ್ಲದಿದ್ದರೆ ದಂಡ ಮತ್ತು ಬಡ್ಡಿ ಬೀಳುತ್ತದೆ. 2025ರ ಜನವರಿಗೂ ಹಿಂದಿನ ಬಿಲ್‌ ಇನ್ನೂ ಪಾವತಿಯಾಗಿಲ್ಲ. ನೌಕರರು ಬೆಳಿಗ್ಗೆ 5.30ಕ್ಕೆ ಕೆಲಸಕ್ಕೆ ಹಾಜರಾಗಲು ಅವಶ್ಯವಿರುವ ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಲ್ಪಿಸಲು ಕೋರಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದರು.

ಎಸ್ಮಾ ಜಾರಿ: ಕರ್ನಾಟಕ ಅಗತ್ಯ ಸೇವೆಗಳ ನಿಯರ್ವಹಣಾ ಕಾಯ್ದೆ–(ಎಸ್ಮಾ) 2013ರ ಕಲಂ 3ರಂತೆ, ಜಿಬಿಎ ವ್ಯಾಪ್ತಿಯಲ್ಲಿ ಸರಬರಾಜುದಾರರು/ ಗುತ್ತಿಗೆದಾರರ ಅಧೀನದಲ್ಲಿರುವ ಎಲ್ಲ ಪೌರ ಕಾರ್ಮಿಕರು, ಆಟೊ ಸಹಾಯಕರು, ಕಾಂಪ್ಯಾಕ್ಟರ್‌ ಲೋಡರ್‌ಗಳು, ಚಾಲಕರು ಮುಂದಿನ ಒಂದು ವರ್ಷ ಮುಷ್ಕರ ಹೂಡುವುದನ್ನು ನಿಷೇಧಿಸಿ, ನಗರಾಭಿವೃದ್ಧಿ ಇಲಾಖೆ ಸೆ.19ರಂದು ಅಧಿಸೂಚನೆ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.