
ಹುಲಸೂರು ಸಮೀಪದ ಭಾಲ್ಕಿ ತಾಲೂಕಿನ ಮೇಹಕರ್ನಲ್ಲಿ ಜೆಸಿಬಿ ಯಂತ್ರದಿಂದ ಭಾನುವಾರ ತಹಶೀಲ್ದಾರ್ ಮಲ್ಲಿಕಾರ್ಜುನ್ ಒತ್ತುವರಿ
ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹80.90 ಕೋಟಿ ಅಂದಾಜು ಮೌಲ್ಯದ 16.23 ಎಕರೆ ಸರ್ಕಾರಿ ಜಮೀನನ್ನು ಶನಿವಾರ ತೆರವುಗೊಳಿಸಿ, ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.
ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಸ್ಮಶಾನ, ಗುಂಡುತೋಪು, ಚರಂಡಿ, ರಾಜಕಾಲುವೆ, ಸರ್ಕಾರಿ ಕೆರೆ, ಗೋಮಾಳ ಮತ್ತು ಹಿಡುವಳಿ ಜಾಗಗಳ ತೆರವು ಕಾರ್ಯಾಚರಣೆ ಕೈಗೊಂಡರು.
ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಕೊಪ್ಪ ಗ್ರಾಮದಲ್ಲಿ 7.21 ಎಕರೆ ಗೋಮಾಳ, ಕಸಬಾ ಹೋಬಳಿಯ ಮರಸೂರು ಗ್ರಾಮದಲ್ಲಿ 1.02 ಗುಂಟೆ ಚರಂಡಿ ಜಾಗ, ಅತ್ತಿಬೆಲೆ ಹೋಬಳಿಯ ಇಂಡಬೆಲೆ ಗ್ರಾಮದಲ್ಲಿ 30 ಗುಂಟೆ ರಾಜಕಾಲುವೆ, ಯಡವನಹಳ್ಳಿ ಗ್ರಾಮದಲ್ಲಿ 0.06 ಗುಂಟೆ ಸರ್ಕಾರಿ ಜಾಗದಲ್ಲಿನ ಒತ್ತುವರಿ ತೆರವುಗೊಳಿಸಲಾಗಿದೆ.
ಸರ್ಜಾಪುರ ಹೋಬಳಿ ದೊಮ್ಮಸಂದ್ರ ತಿಗಳಚೌಡೇನಹಳ್ಳಿಯಲ್ಲಿ 10 ಗುಂಟೆ ರಾಜಕಾಲುವೆ, ಅಡಿಗಾರಕಲ್ಲಹಳ್ಳಿಯಲ್ಲಿ 20 ಗುಂಟೆ ಕೆರೆ, ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಬೆಟ್ಟಹಳ್ಳಿ ಗ್ರಾಮದಲ್ಲಿ 5.10 ಎಕರೆ ಸರ್ಕಾರಿ ಗೋಮಾಳದ ಒತ್ತುವರಿಯನ್ನು ತೆರವು ಮಾಡಲಾಗಿದೆ.
ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿ ರಾಂಪುರದಲ್ಲಿ 10 ಗುಂಟೆ ಸ್ಮಶಾನ, ಬಿದರಹಳ್ಳಿ ಹೋಬಳಿ ಹಿರಂಡಹಳ್ಳಿಯಲ್ಲಿ 0.05 ಗುಂಟೆ ಗುಂಡುತೋಪು, ದಕ್ಷಿಣ ತಾಲ್ಲೂಕಿನ ದೊಡ್ಡಮಾರನಹಳ್ಳಿಯಲ್ಲಿ 14 ಗುಂಟೆ ಗೋಮಾಳ, ಯಲಹಂಕ ತಾಲ್ಲೂಕು ಹೆಸರಘಟ್ಟ ಹೋಬಳಿ ಬಿಳಿಜಾಜಿಯಲ್ಲಿ 15 ಗುಂಟೆ ಹಿಡುವಳಿ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.