ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಇತರೆಡೆ, ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಉತ್ತರ ಕಾಸರಗೋಡು ಪ್ರದೇಶದಲ್ಲಿ ಗೌಡ ಸಮುದಾಯದವರ ಆಡುಭಾಷೆಯಾಗಿರುವ ಅರೆಭಾಷೆ ಕೆಲವೆಡೆ ಪ್ರಾದೇಶಿಕ ಭಾಷೆಯಾಗಿಯೂ ಬೆಳೆದಿದೆ’ ಎಂದು ವಿದ್ವಾಂಸ ಸೀತಾರಾಮ ಕೇವಳ ಹೇಳಿದರು.
ಭಾನುವಾರ ಅರೆಭಾಷೆ ಕುರಿತು ವರ್ಚುವಲ್ ಆಗಿ ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಳ್ಯ ಪ್ರದೇಶದಲ್ಲಿ ಮುಸ್ಲಿಂ, ಕ್ರೈಸ್ತ ಮತ್ತು ಬಂಟ ಸಮುದಾಯದವರಿಗೂ ಅರೆಭಾಷೆ ಗೊತ್ತಿದೆ. ವ್ಯವಹಾರಿಕವಾಗಿ ಅವರು ಈ ಭಾಷೆಯನ್ನೂ ಬಳಸುತ್ತಿದ್ದಾರೆ. ಭಾಷೆಯ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ’ ಎಂದರು.
‘ಕನ್ನಡದಲ್ಲಿ ಅರೆಭಾಷೆ ಅಂದರೆ ಅರ್ಧ ಭಾಷೆ ಎಂದರ್ಥ. ಸಂವಹನದ ಸಂದರ್ಭದಲ್ಲಿ ಬಳಸುವಕನ್ನಡ ಪದದ ಅರ್ಧ ಪದವನ್ನು ಮಾತ್ರ ಅರೆಭಾಷೆಯಲ್ಲಿ ಬಳಸಲಾಗುತ್ತಿದೆ. ಈ ಭಾಷೆಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಇದಕ್ಕೆ ಲಿಪಿ ಇಲ್ಲದ ಕಾರಣ ಕನ್ನಡವನ್ನೇ ಬಳಸುತ್ತಾರೆ’ ಎಂದು ವಿವರಿಸಿದರು.
‘ಅರೆ ಭಾಷೆಯ ನಿಘಂಟು ರಚನೆಯ ಕೆಲಸ ನಡೆಯುತ್ತಿದ್ದು, ಈಗಾಗಲೇ 16,000ಕ್ಕೂ ಹೆಚ್ಚು ಪದಗಳನ್ನು ಸಂಗ್ರಹಿಸಲಾಗಿದೆ’ ಎಂದು ವಿದ್ವಾಂಸ ಡಾ.ವಿಶ್ವನಾಥ ಬದಿಕಾನ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.