ಬೆಂಗಳೂರು: ವಿಳಾಸ ತಪ್ಪಾಗಿದ್ದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗ್ರಾಹಕನ ಮೇಲೆ ಡೆಲಿವರಿ ಯುವಕನೊಬ್ಬ ಹಲ್ಲೆ ನಡೆಸಿದ್ದು, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆಲಿವರಿ ಯುವಕ ವಿಷ್ಣುವರ್ಧನ್ ವಿರುದ್ಧ ಗ್ರಾಹಕ ಶಶಾಂಕ್ ಅವರು ದೂರು ನೀಡಿದ್ದಾರೆ. ಹಲ್ಲೆಯಿಂದ ಕಣ್ಣಿಗೆ ಗಾಯವಾಗಿದೆ ಎಂದು ಶಶಾಂಕ್ ಆರೋಪಿಸಿದ್ದಾರೆ.
ಮೇ 21ರಂದು ಆ್ಯಪ್ವೊಂದರಲ್ಲಿ ಶಶಾಂಕ್ ಅವರ ಪತ್ನಿ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ಬಂದಾಗ ಶಶಾಂಕ್ ಅವರ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಮನೆಯಿಂದ ಹೊರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ವಿಳಾಸ ತಪ್ಪು ನೀಡಿದ್ದೀರಿ ಎಂದು ಡೆಲಿವರಿ ಯುವಕ ಪ್ರಶ್ನೆ ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಗಲಾಟೆ ನಡೆಯುತ್ತಿರುವುದನ್ನು ಗಮನಿಸಿದ ಶಶಾಂಕ್ ಅವರು ಹೊರಗಡೆ ಬಂದು ಪ್ರಶ್ನೆ ಮಾಡಿದ್ದರು. ಆಗ ಗಲಾಟೆ ವಿಕೋಪಕ್ಕೆ ತಿರುಗಿ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ದೃಶ್ಯಗಳು ಅದೇ ಮನೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಘಟನೆ ಕುರಿತು ಶಶಾಂಕ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.