ADVERTISEMENT

ಬೆಂಗಳೂರು: 11 ಬಾರಿ ಇರಿದು ಪತ್ನಿ ಕೊಂದ ಪತಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 16:16 IST
Last Updated 22 ಸೆಪ್ಟೆಂಬರ್ 2025, 16:16 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪುತ್ರಿಯ ಎದುರೇ ಎರಡನೇ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ಸುಂಕದಕಟ್ಟೆ ಬಸ್‌ನಿಲ್ದಾಣದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.

ADVERTISEMENT

ಕೆಬ್ಬೆಹಳ್ಳದ ನಿವಾಸಿ ರೇಖಾ(32) ಕೊಲೆಯಾದ ಮಹಿಳೆ.

ಕೃತ್ಯ ಎಸಗಿದ ಆರೋಪಿ, ರೇಖಾ ಅವರ ಪತಿ ಲೋಹಿತಾಶ್ವ(35) ಎಂಬಾತ ಪರಾರಿಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

11 ಬಾರಿ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ರೇಖಾ ಅವರು ಕೌಟುಂಬಿಕ ಕಾರಣಕ್ಕೆ ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಇಬ್ಬರು ಹೆಣ್ಣು ಮಕ್ಕಳ ಜತೆಗೆ ಚನ್ನೇನಹಳ್ಳಿಯಲ್ಲಿ ನೆಲಸಿದ್ದರು. ಟೆಲಿಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿ‌ದ್ದರು. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಲೋಹಿತಾಶ್ವನಿಗೂ ಮದುವೆಯಾಗಿತ್ತು. ಆತ ಸಹ ಕೌಟುಂಬಿಕ ಕಾರಣಕ್ಕೆ ಪತ್ನಿ, ಮಕ್ಕಳಿಂದ ದೂರವಾಗಿ ಪ್ರತ್ಯೇಕವಾಗಿ ನೆಲಸಿದ್ದ. ಈ ನಡುವೆ ಸ್ನೇಹಿತರ ಮೂಲಕ ಪರಿಚಯವಾದ ರೇಖಾ ಜತೆಗೆ ಸ್ನೇಹ ಬೆಳೆಸಿದ್ದ. ಒಂದೂವರೆ ವರ್ಷದಿಂದ ಇಬ್ಬರೂ ಆತ್ಮೀಯವಾಗಿದ್ದರು. ಮೂರು ತಿಂಗಳ ಹಿಂದೆ ರೇಖಾ ಹಾಗೂ ಲೋಹಿತಾಶ್ವ ಅವರು ಮದುವೆಯಾಗಿದ್ದರು. ಕೆಬ್ಬೆಹಳ್ಳದ ಬಾಡಿಗೆ ಮನೆಯಲ್ಲಿ ರೇಖಾ, ಅವರ ಪುತ್ರಿಯ ಜತೆಗೆ ಲೋಹಿತಾಶ್ವ ವಾಸವಾಗಿದ್ದ. ರೇಖಾ ಅವರು ಕಿರಿಯ ಪುತ್ರಿಯನ್ನು ತನ್ನ ಪೋಷಕರ ಮನೆಯಲ್ಲಿ ಇರಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಮದುವೆಯಾದ ಬಳಿಕ ರೇಖಾ ಅವರು ಪತಿ ಕಂಪನಿಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದರು. ಕೌಟುಂಬಿಕ ಕಾರಣಕ್ಕೆ ಇಬ್ಬರೂ ಪ್ರತಿನಿತ್ಯ ಗಲಾಟೆ ಮಾಡಿಕೊಳ್ಳುತ್ತಿದ್ದರು. ಸೋಮವಾರ ಮುಂಜಾನೆಯೂ ದಂಪತಿ ನಡುವೆ ಗಲಾಟೆ ಆಗಿತ್ತು. ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ರೇಖಾ ಅವರು 13 ವರ್ಷದ ಮಗಳ ಜತೆಗೆ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಸ್ಥಳಕ್ಕೆ ಬಂದಿದ್ದ ಆರೋಪಿ, ಅಲ್ಲೂ ಜಗಳ ಮಾಡಿದ್ದ. ಸ್ಥಳದಲ್ಲಿದ್ದ ಪುತ್ರಿ ಜಗಳ ಬಿಡಿಸಲು ಮುಂದಾಗಿದ್ದಳು. ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ರೇಖಾ ಅವರ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ 11 ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ಸ್ಥಳೀಯರು ಆರೋಪಿ ಹಿಡಿಯಲು ಪ್ರಯತ್ನಿಸಿದ್ದರು. ಅವರಿಗೆ ಚಾಕು ತೋರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

ರೇಖಾ ಅವರ ಜತೆಗೆ ಒಂದೂವರೆ ವರ್ಷದ ಆತ್ಮೀಯತೆ ಹೊಂದಿದ್ದ ಲೋಹಿತಾಶ್ವ, ಮೂರು ತಿಂಗಳ ಹಿಂದೆ ಅವರೊಂದಿಗೆ ಮದುವೆಯಾಗಿದ್ದ. ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಆರೋಪಿ ನಿತ್ಯ ಜಗಳ ಮಾಡುತ್ತಿದ್ದ. ಅದೇ ಕಾರಣಕ್ಕೆ ಕೃತ್ಯ ನಡೆದಿರುವ ಸಾಧ್ಯತೆಯಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.