ADVERTISEMENT

ಓಕಳಿಪುರ ಕಾರಿಡಾರ್‌: ಎರಡು ಮಾರ್ಗ ಮುಂದಿನ ವಾರ ಮುಕ್ತ ?

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 23:35 IST
Last Updated 14 ಫೆಬ್ರುವರಿ 2024, 23:35 IST
   

ಬೆಂಗಳೂರು: ಓಕಳಿಪುರ ಸಿಗ್ನಲ್‌ಮುಕ್ತ ಕಾರಿಡಾರ್‌ನ ಎರಡು ಮಾರ್ಗಗಳು (ಲೂಪ್‌) ಪೂರ್ಣಗೊಂಡಿದ್ದು, ಒಂದು ವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ.

ಮಲ್ಲೇಶ್ವರದಿಂದ ರೈಲು ನಿಲ್ದಾಣ ಹಾಗೂ ರಾಜಾಜಿನಗರದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡು ಮಾರ್ಗಗಳ ನಿರ್ಮಾಣವನ್ನು ಬಿಬಿಎಂಪಿ ಪೂರ್ಣಗೊಳಿಸಿದೆ ಎಂದು ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ತಿಳಿಸಿದರು.

ಓಕಳಿಪುರ ಸಿಗ್ನಲ್‌ಮುಕ್ತ ಕಾರಿಡಾರ್‌ ಯೋಜನೆಯಲ್ಲಿ ಓಕಳಿಪುರದ ಜಂಕ್ಷನ್‌ನಲ್ಲಿ ಆರು ಪಥಗಳನ್ನು ನಿರ್ಮಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ರೈಲ್ವೆ ಇಲಾಖೆಯಿಂದ ಭೂ ಹಸ್ತಾಂತರ ಪ್ರಕ್ರಿಯೆ ನಿಧಾನವಾದ ಕಾರಣ, ಎರಡು ಮಾರ್ಗಗಳನ್ನು ಪೂರ್ಣಗೊಳಿಸುವುದು ವಿಳಂಬವಾಗಿತ್ತು. ಈಗ ಎಲ್ಲವೂ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಉದ್ಘಾಟಿಸಲಾಗುತ್ತದೆ ಎಂದರು.

ADVERTISEMENT

‘ತುಮಕೂರು ಮಾರ್ಗದಡಿ ಪ್ರೀಕಾಸ್ಟ್‌ ಬಾಕ್ಸ್‌ ಅಳವಡಿಕೆ ಪೂರ್ಣವಾಗಿದೆ. ಚೆನ್ನೈ ರೈಲು ಮಾರ್ಗದಡಿ ಪ್ರೀಕಾಸ್ಟ್‌ ಬಾಕ್ಸ್‌ಗಳನ್ನು ರೈಲ್ವೆ ಇಲಾಖೆ ಅಳವಡಿಸಬೇಕಿದೆ. ಅದನ್ನು ಅವರು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಅದು ಮುಗಿದರೆ ಕಾರಿಡಾರ್ ಸಂಪೂರ್ಣಗೊಳ್ಳುತ್ತದೆ’ ಎಂದು ಹೇಳಿದರು.

2013–14ರಲ್ಲಿ ಓಕಳಿಪುರ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆ ಆರಂಭವಾಗಿತ್ತು. ₹337 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಭೂಸ್ವಾಧೀನ ವೆಚ್ಚವೂ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.