ಬೆಂಗಳೂರು: ನಗರದ ಪ್ರಮುಖ, ಮುಖ್ಯ ಹಾಗೂ ವಾರ್ಡ್ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ಬಿಬಿಎಂಪಿ ಆರಂಭಿಸಿದೆ.
‘ಅತಿಯಾದ ಮಳೆಯಿಂದ ಬಹುತೇಕ ಎಲ್ಲ ರಸ್ತೆಗಳಲ್ಲಿ ಗುಂಡಿಬಿದ್ದಿವೆ. ಈ ವಾರ ಮಳೆ ಸಾಕಷ್ಟು ಬಿಡುವು ನೀಡಿದೆ. ಎರಡು ದಿನಗಳಿಂದ ಮಳೆ ಇಲ್ಲ. ಇಂತಹ ಪರಿಸ್ಥಿತಿಯೇ ಮುಂದುವರಿದರೆ ಕೆಲವು ದಿನಗಳಲ್ಲಿ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತದೆ. ನಾಲ್ಕು ಘಟಕಗಳಿಂದ ಮಿಶ್ರಣ ತಯಾರಾಗಿದ್ದು, ಕಾಮಗಾರಿ ಚುರುಕುಗೊಳಿಸಲಾಗಿದೆ. ಹಗಲು– ರಾತ್ರಿಯೂ ಗುಂಡಿ ಮುಚ್ಚುವ ಕೆಲಸ ಮಾಡಲಿದ್ದೇವೆ’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯದ ಮೇಲ್ವಿಚಾರಣೆ ಹೊಂದಿರುವ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದರು.
ವಾರ್ಡ್ ರಸ್ತೆಗಳಲ್ಲೂ ಗುಂಡಿಗಳನ್ನು ಮುಚ್ಚಲು ವಲಯ ಎಂಜಿನಿಯರ್ಗಳಿಗೆ ಸೂಚನೆ ನೀಡಲಾಗಿದೆ ಎಂದರು.
‘ಅಮೃತ ನಗರೋತ್ಥಾನ ಯೋಜನೆಯಲ್ಲಿ ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ₹700 ಕೋಟಿ ಒದಗಿಸಲಾಗಿದೆ. 227 ರಸ್ತೆ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಬಹುತೇಕ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಮಳೆ ಪೂರ್ಣ ಬಿಡುವು ನೀಡಿದರೆ, ಹವಾಮಾನ ಮುನ್ಸೂಚನೆಯನ್ನು ಪರಿಗಣಿಸಿ ಈ ರಸ್ತೆ ಕಾಮಗಾರಿಗಳನ್ನು ಆರಂಭಿಸಲು ಯೋಚಿಸಲಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.