ಲಂಚ
ಬೆಂಗಳೂರು: ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಲಂಚ ಪಡೆಯತ್ತಿದ್ದ ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಾವಿತ್ರಿ ಬಾಯಿ ಅವರು ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಎಚ್ಬಿಆರ್ ಲೇಔಟ್ನ ಮೊಹಮದ್ ಯೂನಸ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸುವ ಸಲುವಾಗಿ ₹1.25 ಲಕ್ಷ ಲಂಚಕ್ಕೆ ಪಿಎಸ್ಐ ಬೇಡಿಕೆ ಇಟ್ಟಿದ್ದರು. ದೂರುದಾರನಿಂದ ಹಣ ಪಡೆಯುತ್ತಿದ್ದ ವೇಳೆ ಡಿಎಸ್ಪಿ ಪೂವಯ್ಯ ನೇತೃತ್ವದ ತಂಡ ಅಧಿಕಾರಿಯನ್ನು ಹಣದ ಸಮೇತ ಬಂಧಿಸಿತು. ಅಧಿಕಾರಿಯ ವಿಚಾರಣೆ ನಡೆಯುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಹಿನ್ನೆಲೆ: ಮದುವೆಯಾಗಿದ್ದರೂ ಮೊಹಮದ್ ಯೂನಸ್ ವಿಷಯ ತಿಳಿಸದೆ ಮತ್ತೊಂದು ಯುವತಿಯ ಜತೆ ಸಹಜೀವನ ನಡೆಸುತ್ತಿದ್ದರು. ವಿಷಯ ಗೊತ್ತಾಗಿ ಯುವತಿ ಆರೋಪಿಯನ್ನು ಪ್ರಶ್ನಿಸಲು ಹೋದಾಗ ಗಲಾಟೆ ನಡೆದು, ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಮತ್ತೆ ಮೇ 5ರಂದು ದೂರುದಾರೆಯನ್ನು ಕರೆಸಿಕೊಂಡ ಆರೋಪಿ, ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದ. ಆಕೆ ನಿರಾಕರಿಸಿದಾಗ ಹಲ್ಲೆ ನಡೆಸಿದ್ದ. ಹಾಗಾಗಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಬಿ ರಿಪೋರ್ಟ್ ಸಲ್ಲಿಸಲು ಸಾವಿತ್ರಿ ಬಾಯಿ ಹಣಕ್ಕೆ ಬೇಡಿಕೆ ಇರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.