
ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ರಸ್ತೆ ರಂಪಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಾರತ್ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೂರಜ್ ಬಿಸ್ವಾಲ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಅ.25ರಂದು ರಾತ್ರಿ 10ರ ಸುಮಾರಿಗೆ ಸೂರಜ್ ಅವರು ತಮ್ಮ ಸಹೋದರನ ಜತೆಗೆ ಕಾರು ನಿಲುಗಡೆ ಮಾಡಲು ತೆರಳುತ್ತಿದ್ದರು. ಆಗ ಅಡ್ಡ ಬಂದಿದ್ದ ಆರೋಪಿಗಳು, ‘ನಿಮ್ಮ ಕಾರು 50 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ’ ಎಂಬುದಾಗಿ ಹೇಳಿದ್ದರು. ‘ಇಲ್ಲ ನಾವು ಕಾರನ್ನು 30 ಕಿ.ಮೀ ವೇಗದಲ್ಲಿ ಓಡಿಸುತ್ತಿದ್ದೇವೆ’ ಎಂದು ಸೂರಜ್ ಪ್ರತಿಕ್ರಿಯಿಸಿದ್ದರು. ಆಗ ಆರೋಪಿಗಳು ಹಾಗೂ ದೂರುದಾರರ ನಡುವೆ ವಾಗ್ವಾದ ನಡೆದಿತ್ತು. ದೂರುದಾರ ಹಾಗೂ ಅವರ ಸಹೋದರನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ವಿಡಿಯೊ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಯಿತು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.