ADVERTISEMENT

ಶಿಕ್ಷಣದಿಂದ ಪರಿಸರ ರಕ್ಷಣೆಯ ಪ್ರಜ್ಞೆ ಮೂಡಿಸಿ: ರಾಜ್ಯಪಾಲ ಗೆಹಲೋತ್‌ ಸಲಹೆ

ಬೆಂಗಳೂರು ಸುಸ್ಥಿರತೆ ಸಮಾವೇಶ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 22:13 IST
Last Updated 15 ಡಿಸೆಂಬರ್ 2021, 22:13 IST
ಒ.ಪಿ.ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ‘ಸುಸ್ಥಿರ ಅಭಿವೃದ್ಧಿ ವರದಿ’ಯನ್ನು (ಎಡದಿಂದ ಮೂರನೆಯವರು) ರಾಜ್ಯ‍ಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು. ಪ್ರೊ.ಎಂ.ವಿ.ರಾಜೀವ್ ಗೌಡ, ಪ್ರೊ.ಸಿ.ರಾಜ್ ಕುಮಾರ್, ಸುಧೀರ್ ಮಿಶ್ರಾ ಹಾಗೂ ಕೆ.ಜೈರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ
ಒ.ಪಿ.ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ‘ಸುಸ್ಥಿರ ಅಭಿವೃದ್ಧಿ ವರದಿ’ಯನ್ನು (ಎಡದಿಂದ ಮೂರನೆಯವರು) ರಾಜ್ಯ‍ಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು. ಪ್ರೊ.ಎಂ.ವಿ.ರಾಜೀವ್ ಗೌಡ, ಪ್ರೊ.ಸಿ.ರಾಜ್ ಕುಮಾರ್, ಸುಧೀರ್ ಮಿಶ್ರಾ ಹಾಗೂ ಕೆ.ಜೈರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪರಿಸರ ಸಂರಕ್ಷಣೆ ಕುರಿತಾದ‍ಪಠ್ಯಕ್ರಮ ಅಳವಡಿಸುವ ಮೂಲಕ ವಿದ್ಯಾರ್ಥಿ ಹಂತದಲ್ಲೇ ಪರಿಸರ ಪ್ರಜ್ಞೆ ಮೂಡಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಸಲಹೆ ನೀಡಿದರು.

ಒ.ಪಿ.ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯವು (ಜೆಜಿಯು) ‘ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನ–ಪರಿಸರ ರಕ್ಷಿಸುವಲ್ಲಿ ವಿಶ್ವವಿದ್ಯಾಲಯಗಳು ಮತ್ತು ನಾಗರಿಕ ಸಮಾಜದ ಪಾತ್ರ’ ಕುರಿತು ಬುಧವಾರ ಆಯೋಜಿಸಿದ್ದ ‘ಬೆಂಗಳೂರು ಸುಸ್ಥಿರತೆ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ಜಲಸಂಪನ್ಮೂಲಗಳ ರಕ್ಷಣೆ, ಹವಾಮಾನ ಬದಲಾವಣೆ ಸಮಸ್ಯೆಗಳು, ಹೆಚ್ಚುತ್ತಿರುವ ಮಾಲಿನ್ಯದಂತಹ ವಿಷಯಗಳ ಕುರಿತು ಜಾಗೃತಿ ಮೂಡಿಸುವುದು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಪ್ರಮುಖ ಶಿಫಾರಸುಗಳಲ್ಲಿ ಒಂದು. ಸುಸ್ಥಿರ ಅಭಿವೃದ್ಧಿ ಗುರಿಗಳು ನಮ್ಮ ದೃಷ್ಟಿ ಮತ್ತು ಚಿಂತನೆಯ ಅಡಿಪಾಯ. ಜನರ ಮೇಲೆ ಪರಿಣಾಮ ಬೀರುತ್ತಿರುವ ಪರಿಸರ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಇದಕ್ಕಾಗಿ ರಾಜ್ಯಮಟ್ಟದ ಯೋಜನೆಗಳನ್ನು ಆರಂಭಿಸಲಾಗಿದ್ದು, ಇದರಲ್ಲಿ ರಾಜ್ಯಗಳ ಭಾಗವಹಿಸುವಿಕೆ ಬಹು ಮುಖ್ಯ’ ಎಂದರು.

ADVERTISEMENT

ಜೆಜಿಯು ಕುಲಪತಿ ಸಿ.ರಾಜ್ ಕುಮಾರ್,‘ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಚ್ಛ ಕ್ಯಾಂಪಸ್ ಶ್ರೇಯಾಂಕದಲ್ಲಿಜೆಜಿಯು ಉನ್ನತ ಶ್ರೇಣಿ ಪಡೆದಿದೆ. ಹಸಿರಿನಿಂದ ಕೂಡಿದ ಮತ್ತು ಸಾಮಾಜಿಕವಾಗಿ ಜಾಗೃತಗೊಂಡಿರುವ ಕ್ಯಾಂಪಸ್ ಹೊಂದುವ ಗುರಿಯನ್ನು ಸುಸ್ಥಿರ ಅಭಿವೃದ್ಧಿ ವರದಿಯಲ್ಲಿ ಅಳವಡಿಸಲಾಗಿದೆ’ ಎಂದರು.

ಟ್ರಸ್ಟ್‌ ಲೀಗಲ್ ಅಡ್ವೊಕೇಟ್ಸ್‌ ಆ್ಯಂಡ್ ಕನ್ಸಲ್ಟೆಂಟ್ಸ್‌ನ ಸಂಸ್ಥಾಪಕ ಸುಧೀರ್ ಮಿಶ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.