
ಬೆಂಗಳೂರು: ಕೆಲಸ ಮುಗಿಸಿಕೊಂಡು ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ಯುವತಿಗೆ ಕಿರುಕುಳ ನೀಡಿದ್ದ ಮೂವರು ಆರೋಪಿಗಳನ್ನು ಆಗ್ನೇಯ ವಿಭಾಗದ ಸದ್ದುಗುಂಟೆಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶೇಖ್ ಆಯಾನ್(19), ಶೇಖ್ ರೋಷನ್ (19) ಹಾಗೂ ರಿಹಾನ್ ಖಾನ್ (18) ಬಂಧಿತರು.
‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಡಿ.25ರ ರಾತ್ರಿ ಕೆಲಸ ಮುಗಿಸಿಕೊಂಡು ಮೈಕೊಲೇಔಟ್ನಲ್ಲಿರುವ ಮನೆಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಬಿಟಿಎಂಲೇಔಟ್ನ ಮುಖ್ಯರಸ್ತೆಯಲ್ಲಿ ಮೂವರು ಯುವಕರು, ಹೆಲ್ಮೆಟ್ ಧರಿಸದೆ ಒಂದೇ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಯುವತಿಯನ್ನು ಸುಮಾರು 2 ಕಿ.ಮೀ. ವರೆಗೂ ಹಿಂಬಾಲಿಸಿದ್ದರು. ಅಲ್ಲದೇ ಕಿರುಕುಳ ನೀಡಿದ್ದರು. ದ್ವಿಚಕ್ರ ವಾಹನದ ಹಿಂದೆಯೇ ಕಾರು ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರು, ಯುವಕರ ಕೃತ್ಯ ಗಮನಿಸಿ ತಮ್ಮ ಮೊಬೈಲ್ನಲ್ಲಿ ವಿಡಿಯೊ ಮಾಡಿದ್ದರು. ಆ ವಿಡಿಯೊವನ್ನು ನಗರ ಪೊಲೀಸ್ ‘ಎಕ್ಸ್’ ಖಾತೆಗೆ ಟ್ಯಾಗ್ ಮಾಡಿದ್ದರು. ಆ ವಿಡಿಯೊವನ್ನು ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಸ್ಕೂಟಿಯ ನೋಂದಣಿ ಸಂಖ್ಯೆ ಪತ್ತೆಯಾಗಿತ್ತು. ಅದನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಿ ಮೂವರನ್ನು ಬಂಧಿಸಿದ್ದೇವೆ. ಬೇಗೂರು ಚಿಕನ್ ಶಾಪ್ನಲ್ಲಿ ರೋಷನ್ ಹಾಗೂ ಬಿಟಿಎಂ ಮೊದಲ ಹಂತದ ಚಿಕನ್ ಶಾಪ್ನಲ್ಲಿ ಶೇಖ್ ಆಯಾನ್ ಕೆಲಸ ಮಾಡುತ್ತಿದ್ದರು. ಬಿಟಿಎಂ ಮೊದಲ ಹಂತದ ಗ್ಯಾರೇಜ್ನಲ್ಲಿ ರಿಹಾನ್ ಖಾನ್ ಕೆಲಸ ಮಾಡುತ್ತಿದ್ದ. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.