ಬೆಂಗಳೂರು: ಬೆಸ್ಕಾಂನ ಬಿಡದಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಮೋಹಿತಾ ಎಚ್. ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದು, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಬೆಸ್ಕಾಂನ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರು ಶಿಫಾರಸು ಮಾಡಿದ್ದಾರೆ.
ಮಂಜೂರಾತಿ ಪಡೆಯದೆ ಕಾಮಗಾರಿಗಳ ನಿರ್ವಹಣೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಿ ಬೆಸ್ಕಾಂಗೆ ನಷ್ಟವನ್ನು ಉಂಟುಮಾಡಿದ್ದಾರೆ. ಮನೆ ನಿರ್ಮಾಣ ಪೂರ್ಣಗೊಂಡಿರುವ ಪ್ರಮಾಣಪತ್ರ, ಸ್ವಾಧೀನಾನುಭವ ಪತ್ರ ಇಲ್ಲದೆ ಇದ್ದರೂ ಮೋಹಿತಾ ಅವರು ವಿದ್ಯುತ್ ಸಂಪರ್ಕಕ್ಕೆ ಅನುಮೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಡದಿ ಉಪ ವಿಭಾಗದ ಕಚೇರಿಯಲ್ಲಿ ಸಹಾಯಕ ಪವರ್ಮ್ಯಾನ್ಗಳಾದ ಸುರೇಶ್ ಅವರಿಗೆ ತಾಂತ್ರಿಕ ಶಾಖೆಯಲ್ಲಿ, ದಿನೇಶ್ ಅವರಿಗೆ ಕಂದಾಯ ಶಾಖೆಯಲ್ಲಿ ಅನಧಿಕೃತವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ಪ್ರಸ್ತಾಪಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡದೆ ಇರುವ ಬಡಾವಣೆಗೆ, ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಬಿಂಬಿಸಿ ನಿವೇಶನ ಖರೀದಿದಾರರಿಗೆ ಮೋಸ ಮಾಡಲಾಗಿದೆ. ಲೇಔಟ್ ಅಭಿವೃದ್ಧಿಪಡಿಸಿದವರೊಂದಿಗೆ ಅಕ್ರಮದಲ್ಲಿ ಭಾಗಿಯಾಗಿ ಬೆಸ್ಕಾಂಗೆ ನಷ್ಟವನ್ನುಂಟು ಮಾಡಿರುವುದು ಕಂಡುಬಂದಿದೆ ಎಂದು ಪ್ರಧಾನ ವ್ಯವಸ್ಥಾಪಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.