ಬೆಂಗಳೂರು: ‘ಕೋವಿಡ್ ಕಾಣಿಸಿಕೊಂಡ ಬಳಿಕ ಅಂಗಾಂಗಗಳ ಸಂಗ್ರಹ ಮತ್ತು ಕಸಿ ಶಸ್ತ್ರಚಿಕಿತ್ಸೆಗೆ ನಗರದಲ್ಲಿ ಹಿನ್ನಡೆಯಾಗಿದೆ. ಅತಿಯಾದ ಆಹಾರ, ಮದ್ಯ ಸೇವನೆಯಿಂದ ಯಕೃತ್ತು ಸಂಬಂಧಿ ಸಮಸ್ಯೆ ಹೆಚ್ಚಳವಾಗುತ್ತಿದೆ’ ಎಂದುಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆ ಮುಖ್ಯ ಕಾರ್ಯಾಚರಣೆ ಅಧಿಕಾರಿಬಿಜು ನಾಯರ್ ತಿಳಿಸಿದರು.
ಆಸ್ಪತ್ರೆಯು 250 ಯಕೃತ್ತು ಕಸಿ ನಡೆಸಿದ ಪ್ರಯುಕ್ತ ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ‘ಕಸಿ ಶಸ್ತ್ರಚಿಕಿತ್ಸೆಗೆ ಕೋವಿಡ್ ಅಡ್ಡಿಪಡಿಸಿತ್ತು. ದಾನಿಗಳ ಕೊರತೆ, ಪ್ರಯಾಣದ ನಿರ್ಬಂಧ ಸೇರಿದಂತೆ ವಿವಿಧ ಕಾರಣಗಳಿಂದ ಕೋವಿಡ್ ಮೊದಲೆರಡು ಅಲೆಯಲ್ಲಿ ಕೋವಿಡೇತರ ಕಾಯಿಲೆಗಳ ಚಿಕಿತ್ಸೆ ಸಮಸ್ಯೆಯಾಯಿತು. ಹೆಚ್ಚಿನವರು ಎರಡು ವರ್ಷಗಳಿಂದ ಅಧಿಕ ಸಮಯವನ್ನು ಮನೆಯಲ್ಲಿಯೇ ಕಳೆದಿದ್ದಾರೆ. ಕೆಲವರು ಅತಿಯಾಗಿ ಮದ್ಯಪಾನ ಮಾಡಿದ್ದಾರೆ. ಆಹಾರ ಸೇವನೆಯಲ್ಲಿಯೂ ವ್ಯತ್ಯಯವಾಗಿದೆ. ಇದರಿಂದಾಗಿ ನಗರದಲ್ಲಿ ಯಕೃತ್ತು ಸಂಬಂಧಿತ ಅನಾರೋಗ್ಯ ಸಮಸ್ಯೆ ಹೆಚ್ಚಳವಾಗಿದೆ’ ಎಂದು ಹೇಳಿದರು.
ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಹೇಶ್ ಗೋಪಸೆಟ್ಟಿ, ‘ಕೋವಿಡ್ ನಡುವೆಯೂ ಕಳೆದ ವರ್ಷ 13 ಮಂದಿಗೆ ಯಕೃತ್ತು ಕಸಿ ನಡೆಸಲಾಗಿದೆ.ಯಕೃತ್ತು ವೈಫಲ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕಸಿ ಮರುಜನ್ಮ ನೀಡಲಿದೆ. ಈ ಕಸಿ ಚಿಕಿತ್ಸೆ ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಒಬ್ಬರಿಂದ ಮಾಡಲು ಸಾಧ್ಯವಾಗದು. ಆಸ್ಪತ್ರೆಯಲ್ಲಿನ ವಿವಿಧ ವಿಭಾಗಗಳ ತಜ್ಞರ ನೆರವಿನಿಂದ ಯಶಸ್ವಿಯಾಗಿ ಕಸಿಗಳನ್ನು ನಡೆಸಲಾಗುತ್ತಿದೆ. ಹಲವಾರು ಮಂದಿ ಅಂಗಾಂಗಕ್ಕಾಗಿ ಎದುರು ನೋಡುತ್ತಿದ್ದಾರೆ.ಅಂಗಾಂಗಗಳ ದಾನ ಹೆಚ್ಚಾಗಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.