ಬೆಂಗಳೂರು: ‘ಸ್ಮೈಲ್ ಟ್ರೇನ್ ಇಂಡಿಯಾ ಮತ್ತು ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಸೀಳು ತುಟಿ ಹಾಗೂ ಸೀಳು ಅಂಗಳ ಹೊಂದಿರುವ ಮಕ್ಕಳ ಮುಖದಲ್ಲಿ ನಗು
ತರಿಸಲಾಗುತ್ತಿದೆ.
ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ಮತ್ತು ಸ್ಮೈಲ್ ಟ್ರೈನ್ ಇಂಡಿಯಾ ಸಹಭಾಗಿತ್ವದಲ್ಲಿ 2005ರಿಂದ ಇದುವರೆಗೂ ಸೀಳುತುಟಿ, ಸೀಳು ಅಂಗಳ ಉಚಿತ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಇಲ್ಲಿಯವರೆಗೂ 14,500 ಮಕ್ಕಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಸಮಗ್ರ ಆರೈಕೆ, ಸ್ಪೀಚ್ ಥೆರಪಿ, ಆರ್ಥೊಡಾಂಟಿಕ್ಸ್, ದಂತ ಮತ್ತು ಪೋಷಣೆಯನ್ನು ನೀಡಲಾಗುತ್ತದೆ ಎಂದು ಡಾ.ಕೃಷ್ಣಮೂರ್ತಿ ಬೋನಂ ತಾಯ ಮಾಹಿತಿ ನೀಡಿದರು.
2010ರಲ್ಲಿ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಪ್ರಾರಂಭಿಸಿದ ಸರ್ಜಿಕಲ್ ಫೆಲೋಶಿಪ್ ಕಾರ್ಯಕ್ರಮದ ಅಡಿಯಲ್ಲಿ 26 ಯುವಕರು ಮ್ಯಾಕ್ಸಿಲೋಫೇಶಿಯಲ್ ಶಸ್ತ್ರವೈದ್ಯರಾಗಿ ತರಬೇತಿ ಪಡೆದುಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಸ್ಮೈಲ್ ಟ್ರೈನ್ ಇಂಡಿಯಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸರ್ಜಿಕಲ್ ಫೆಲೋಶಿಪ್ ಕಾರ್ಯಕ್ರಮವು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ. ಇಲ್ಲಿ ತರಬೇತಿ ಪಡೆದ 26 ಫೆಲೊಗಳಲ್ಲಿ 12 ಜನ ಉತ್ತರಾಖಂಡ, ಬಿಹಾರ, ಪಶ್ಚಿಮ ಬಂಗಾಳ, ಗುಜರಾತ್, ತಮಿಳನಾಡು, ಕೇರಳ ಮತ್ತು ನೇಪಾಳದಲ್ಲಿರುವ ಸ್ಮೈಲ್ ಟ್ರೈನ್ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
‘35 ವರ್ಷ ಮ್ಯಾಕ್ಸಿಫೇಶಿಯಲ್ ಸರ್ಜನ್ ಆಗಿ ಕಾರ್ಯನಿರ್ವಹಿಸಿದ್ದೇನೆ. 2010ರಿಂದ ವೃತ್ತಿಪರರಿಗೆ ತರಬೇತಿ ನೀಡಲು ಸರ್ಜಿಕಲ್ ಫೆಲೋಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಸೀಳು ತುಟಿ ಮತ್ತು ಅಂಗಳ ಸಮಸ್ಯೆಗೆ ಸ್ಮೈಲ್ ಟ್ರೈನ್ ಇಂಡಿಯಾ ಉಚಿತವಾಗಿ ಚಿಕತ್ಸೆ ನೀಡುತ್ತಿದ್ದು, ಇದೊಂದು ಲಾಭರಹಿತ ಸಂಸ್ಥೆಯಾಗಿದೆ’ ಎಂದು ಡಾ.ಕೃಷ್ಣಮೂರ್ತಿ ಬೋನಂತಾಯ ತಮ್ಮ ಅನುಭವವನ್ನು ಹಂಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.