ADVERTISEMENT

ಭೀಮನಕಟ್ಟೆ ಕೆರೆ ಏರಿ ಒಡೆಯುವ ಆತಂಕ

ನಿತ್ಯವೂ ಜಿನುಗುವ ನೀರು, ಮಳೆಯಾದರೆ ಮನೆಗಳಿಗೆ ನೀರು ನುಗ್ಗುವ ಭಯ

Published 1 ಏಪ್ರಿಲ್ 2021, 4:20 IST
Last Updated 1 ಏಪ್ರಿಲ್ 2021, 4:20 IST
ಭೀಮನಕಟ್ಟೆ ಕೆರೆ ಏರಿ ಮೇಲ್ಭಾಗ ಒಡೆದುಹೋಗಿ, ನೀರು ಜಿನುಗುತ್ತಿರುವುದರಿಂದ ಮೂಟೆಗಳನ್ನು ಇಡಲಾಗಿದೆ ಪ್ರಜಾವಾಣಿ ಚಿತ್ರ/ ರಂಜು ಪಿ.
ಭೀಮನಕಟ್ಟೆ ಕೆರೆ ಏರಿ ಮೇಲ್ಭಾಗ ಒಡೆದುಹೋಗಿ, ನೀರು ಜಿನುಗುತ್ತಿರುವುದರಿಂದ ಮೂಟೆಗಳನ್ನು ಇಡಲಾಗಿದೆ ಪ್ರಜಾವಾಣಿ ಚಿತ್ರ/ ರಂಜು ಪಿ.   

ಬೆಂಗಳೂರು: ಕೆರೆ ಉಳಿಸಿಕೊಳ್ಳಲು ಹಾಗೂ ಅಭಿವೃದ್ಧಿ ಮಾಡಲು ಹೋರಾಡಿದ್ದ ಸ್ಥಳೀಯ ನಾಗರಿಕರು, ಇದೀಗ ಕೆರೆಗೆ ನೀರು ಬರದಿದ್ದರೆ ಸಾಕು ಎನ್ನುತ್ತಿದ್ದಾರೆ. ಏಕೆಂದರೆ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಯಾಗಿರುವ ಭೀಮನಕಟ್ಟೆ ಕೆರೆ ಏರಿ ನಾಲ್ಕು ವರ್ಷದಲ್ಲೇ ಒಡೆದು ಹೋಗುವ ಸ್ಥಿತಿ ತಲುಪಿದೆ.

ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿರುವ ಭೀಮನಕಟ್ಟೆ ಕೆರೆಯನ್ನು ₹ 33.88 ಲಕ್ಷ ವೆಚ್ಚದಲ್ಲಿ 2017ರಲ್ಲಿ ಅಭಿವೃದ್ಧಿ ಮಾಡಲಾಗಿದೆ. ಆದರೆ, 2020ರ ಅಕ್ಟೋಬರ್‌ನಲ್ಲಿ ಸುರಿದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ, ಕೆರೆಯ ಏರಿ (ಮುಖ್ಯ ದಂಡೆ) ಸಡಿಲಗೊಂಡಿದೆ. ಮೇಲ್ಭಾಗಒಡೆದು ಹೋಗಿ ನೀರು ಹರಿದಿತ್ತು. ಈಗಲೂ ಕೆರೆಯ ನೀರು ಜಿನುಗುತ್ತಿದ್ದು, ಪಕ್ಕದ ಅಪಾರ್ಟ್‌ಮೆಂಟ್‌ ಸಮುಚ್ಚಯ ಹಾಗೂ ಬಡಾವಣೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.


ರಾಜರಾಜೇಶ್ವರಿನಗರದಲ್ಲಿರುವಭೀಮನಕಟ್ಟೆಕೆರೆ
ಚಿತ್ರ: ರಂಜು

‘ನೀರು ಸಂಗ್ರಹ ಸಾಮರ್ಥ್ಯ ತುಂಬಾ ಕಡಿಮೆ ಇದೆ. ಆದರೂ, ಕೆರೆ ಏರಿ ಮೇಲ್ಭಾಗದಲ್ಲಿ ಒಡೆದುಹೋಗಿದೆ. ಈಗ ನೀರು ಕಡಿಮೆಯಾಗಿದ್ದರೂ ಏರಿಯ ಕೆಳಭಾಗದಿಂದ ಜಿನುಗುತ್ತಲೇ ಇದೆ. ಒಂದು ಮಳೆ ಬಂದು ಹೆಚ್ಚಿನ ನೀರು ಬಂದರೆ, ಏರಿ ಒಡೆದುಹೋಗಿ ಈ ಕೆಳಭಾಗದಲ್ಲಿರುವ ನಿವಾಸಿಗಳಿಗೆಲ್ಲ ಅಪಾಯವಾಗುತ್ತದೆ. ಈ ಬಗ್ಗೆ ಬಿಬಿಎಂಪಿಗೆ ಹಲವಾರು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಭೀಮನಕಟ್ಟೆ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಕೆ.ಎ. ಶಿವೇಗೌಡ ದೂರಿದರು.

ADVERTISEMENT

‘ಬಿಬಿಎಂಪಿಯವರು ಒಡೆದುಹೋಗಿರುವ ಏರಿಯ ಕಲ್ಲಿಗೆ ಬಣ್ಣ ಬಳಿದಿದ್ದಾರೆ. ಬಿದ್ದುಹೋಗಿರುವ ಬೇಲಿಗೂ ಬಣ್ಣ ಬಳಿದು, ನಿರ್ವಹಣೆ ಎಂದು ತೋರುತ್ತಿದ್ದಾರೆ. ಏರಿ ದುರಸ್ತಿ ಮಾಡಿ, ಭದ್ರಪಡಿಸಿ ಎಂದು ಪತ್ರ ಬರೆದಿದ್ದರೂ ಯಾರೂಕ್ರಮ ಕೈಗೊಂಡಿಲ್ಲ. ಮಳೆಯಾದರೆ ಇಲ್ಲಿನ ಜನರ ಜೀವಕ್ಕೆ ಆಪತ್ತುಖಂಡಿತ’ ಎಂದು ಭೀಮನಕಟ್ಟೆ ಹಿತರಕ್ಷಣಾ ಸಮಿತಿ ನಿರ್ದೇಶಕ ಮಾಧವ್‌ ವಡವಿ ಆತಂಕ ವ್ಯಕ್ತಪ‍ಡಿಸಿದರು.

ಮಾಧವ್‌ ವಡವಿ

‘ಕೆರೆಯ ಅಭಿವೃದ್ಧಿಯೇನೋ ಆಗಿದೆ. ಆದರೆ ಇದರ ನಿರ್ವಹಣೆ ಯಾರೂ ಮಾಡುತ್ತಿಲ್ಲ. ನೆಟ್ಟಿರುವ ಗಿಡ–ಮರಗಳು ಒಣಗಿಹೋಗುತ್ತಿವೆ. ಸ್ಥಳೀಯರೇ ನೀರು ಹಾಕಿ ರಕ್ಷಿಸುತ್ತಿದ್ದಾರೆ. ಕೆರೆ ಕಾವಲಿಗೆ ಗೃಹ ರಕ್ಷಕ ಸಿಬ್ಬಂದಿಯನ್ನು ನೇಮಿಸಿದ್ದಾರೆ. ಆದರೆ ನಿರ್ವಹಣೆಗೆ ಯಾರೂ ಇಲ್ಲ’ ಎಂದು ಸಮಿತಿ ಸದಸ್ಯರು ದೂರಿದರು.

**

ಕೆರೆ ಏರಿಯಿಂದ ನೀರು ನಿತ್ಯವೂ ಜಿನುಗುತ್ತಿದೆ. ದುರಸ್ತಿ ಮಾಡಲು 6 ತಿಂಗಳ ಹಿಂದೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ.


-ಕೆ.ಎ. ಶಿವೇಗೌಡ,ಕಾರ್ಯದರ್ಶಿ, ಭೀಮನಕಟ್ಟೆ ಹಿತರಕ್ಷಣಾ ಸಮಿತಿ

***

ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಅನುದಾನ ಮಂಜೂರಾದ ಕೂಡಲೇ ಕೆರೆ ದಂಡೆಯ ದುರಸ್ತಿ ಮಾಡಲಾಗುತ್ತದೆ.
-ಬಿ.ಟಿ. ಮೋಹನ್‌ ಕೃಷ್ಣ, ಮುಖ್ಯ ಎಂಜಿನಿಯರ್‌, ಕೆರೆಗಳ ಘಟಕ, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.