ADVERTISEMENT

ಕೆಜಿಎಫ್‌ ತೋಟದ ಮನೆಯಲ್ಲಿದ್ದ ವಾಹನಗಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 21:42 IST
Last Updated 22 ನವೆಂಬರ್ 2022, 21:42 IST

ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ಸಯ್ಯದ್ ಸಲ್ಮಾನ್ (25) ಎಂಬುವರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.

‘ಕೋಲಾರ ಕೆಜಿಎಫ್‌ನ ಅಂಡರ್‌ಸನ್‌ ಪೇಟೆಯ ಸಲ್ಮಾನ್, ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಈತನಿಂದ ₹ 12 ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತನ್ನೂರಿನಿಂದ ಆಗಾಗ ನಗರಕ್ಕೆ ಬರುತ್ತಿದ್ದ ಆರೋಪಿ, ಹಲವೆಡೆ ಸುತ್ತಾಡುತ್ತಿದ್ದ. ಮನೆಗಳ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ವಾಹನಗಳನ್ನು ಗುರುತಿಸುತ್ತಿದ್ದ. ಹ್ಯಾಂಡಲ್‌ ಲಾಕ್ ಮುರಿದು ವಾಹನಗಳನ್ನು ಕದ್ದೊಯ್ಯುತ್ತಿದ್ದ.’

ADVERTISEMENT

‘ಕೆಜಿಎಫ್‌ನಲ್ಲಿರುವ ತೋಟದ ಮನೆ ಹಾಗೂ ನಿರ್ಜನ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದ. ನೋಂದಣಿ ಫಲಕ ಬದಲಿಸಿ ಮಾರುತ್ತಿದ್ದ. ಇದರಿಂದ ಬಂದ ಹಣವನ್ನು ಮೋಜು–ಮಸ್ತಿಗೆ ಖರ್ಚು ಮಾಡುತ್ತಿದ್ದ. ಈತನನ್ನು ಬಂಧಿಸಿದ ನಂತರ, ತೋಟದ ಮನೆ ಮೇಲೆ ದಾಳಿ ಮಾಡಿ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಕೆ.ಆರ್.ಪುರ, ಬಾಣಸವಾಡಿ, ಯಲಹಂಕ ಹಾಗೂ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ವಾಹನ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.