ADVERTISEMENT

ಮದುವೆಗೆ ಕೋಟಿಗಟ್ಟಲೆ ಖರ್ಚು ಮೊದಲ ರಾತ್ರಿಯೇ ಪತ್ನಿಗೆ ಕಿರುಕುಳ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 21:46 IST
Last Updated 4 ಡಿಸೆಂಬರ್ 2020, 21:46 IST

ಬೆಂಗಳೂರು: ಕೋಟಿಗಟ್ಟಲೆ ಖರ್ಚು ಮಾಡಿ, ಒಂದು ತಿಂಗಳ ಹಿಂದೆಯಷ್ಟೇ ಅದ್ಧೂರಿಯಾಗಿ ನಡೆದಿದ್ದ ಮದುವೆ ಈಗ ಮುರಿದು ಬಿದ್ದಿದೆ. ಮೊದಲ ರಾತ್ರಿಯಂದೇ ಪತಿ ಕಂಠಪೂರ್ತಿ ಕುಡಿದು ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿ ಎಚ್‍ಎಎಲ್ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಾರೆ.

ದೂರು ಆಧರಿಸಿ ಎಸ್‍ಎಲ್‍ಬಿ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಭರತ್ ರೆಡ್ಡಿ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಅಕ್ಟೋಬರ್‌ನಲ್ಲಿ ದೊಡ್ಡ ಬಾಣಸವಾಡಿಯ ಯುವತಿಯೊಂದಿಗೆ ಭರತ್ ವಿವಾಹವಾಗಿದ್ದ. ಮದುವೆಯ ಮೊದಲ ದಿನದಂದು ಪಾನಮತ್ತನಾಗಿ ಬಂದು ಪತ್ನಿ ಜೊತೆ ಜಗಳವಾಡಿದ್ದ. ಇದಕ್ಕೆ ಹೆದರಿದ ಸಂತ್ರಸ್ತೆ, ಆತನಿಂದ ಅಂತರ ಕಾಯ್ದುಕೊಂಡಿದ್ದರು. ಮರುದಿನವೂ ಇದೇ ರೀತಿ ಕುಡಿದು ಬಂದಿದ್ದ. ತನ್ನ ಮೇಲೆ ಹಲ್ಲೆಗೂ ಯತ್ನಿಸಿದ್ದಾನೆ. ಪತಿಯ ಕುಟುಂಬದವರೂ ಹಿಂಸೆ ನೀಡುತ್ತಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು

ADVERTISEMENT

‘ಭರತ್‍ನ ಕೆಟ್ಟ ವರ್ತನೆಗಳ ಕುರಿತು ಅತ್ತೆ-ಮಾವನಿಗೆ ಸಂತ್ರಸ್ತೆ ವಿವರಿಸಿದ್ದರು. ಆದರೆ, ಅತ್ತೆ– ಮಾವ ವಾಮಾಚಾರ ಮಾಡಿಸಿ, ಹಿಂಸೆ ನೀಡಿದ್ದಾರೆ. ಭರತ್‍ಗೆ ಈ ಹಿಂದೆ ಬೇರೊಬ್ಬ ಯುವತಿ ಜೊತೆಗೆ ಮದುವೆಯಾಗಿದೆ. ಈ ವಿಚಾರವನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದಾನೆ’ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

‘ಮಗಳ ಮದುವೆ ಮಾಡಲು ನಿರ್ಧರಿಸಿದ್ದ ತಂದೆ, ಭರತ್ ಒಳ್ಳೆಯ ಕುಟುಂಬದವನು ಎಂದು ನಂಬಿದ್ದರು. ಅಳಿಯ ಬೇಡಿಕೆ ಇಟ್ಟಿದ್ದ ದುಬಾರಿ ಬೆಂಜ್ ಕಾರು, 5 ಕೆ.ಜಿ.ಯಷ್ಟು
ಚಿನ್ನಾಭರಣ, ₹5 ಲಕ್ಷ ಮೌಲ್ಯದ ವಜ್ರದ ಉಂಗುರ ಸೇರಿದಂತೆ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅದ್ಧೂರಿ ಮದುವೆ ನೆರವೇರಿಸಿಕೊಟ್ಟಿದ್ದರು. ಆದರೂ ವರದಕ್ಷಿಣೆಗಾಗಿ ಭರತ್
ಗಲಾಟೆ ಮಾಡಿದ್ದಾನೆ’ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.