ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರು ಬೌದ್ಧ ಧರ್ಮ ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೂ ಮೀಸಲಾತಿ ಸೌಲಭ್ಯವನ್ನು ರದ್ದುಗೊಳಿಸುವ ಕ್ರಮ ಸ್ವಾಗತಾರ್ಹವಾದುದು ಎಂದು ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
‘ಈ ವರ್ಗದ ಜನರಿಗೆ ಆಸೆ ಆಮಿಷಗಳನ್ನು ಒಡ್ಡಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗೆ ಮತಾಂತರ ಮಾಡಲಾಗುತ್ತಿದೆ. ಆದರೂ ಆ ಧರ್ಮಗಳಿಗೆ ಸೇರಿದ ಪರಿಶಿಷ್ಟರ ಬದುಕು ಬದಲಾಗಿಲ್ಲ. ಅವರಿಗೆ ಉತ್ತಮ ಬದುಕು ಸಿಗುತ್ತಿಲ್ಲ. ಬೌದ್ಧ ದರ್ಮ ಹೊರತುಪಡಿಸಿ ಕ್ರೈಸ್ತ ಮತ್ತು ಇಸ್ಲಾಂನಲ್ಲೂ ಅವರನ್ನು ದಲಿತರಾಗಿಯೇ ಪರಿಗಣಿಸಲಾಗುತ್ತದೆ’ ಎಂದು ಹೇಳಿದ್ದಾರೆ.
‘ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದವರು ಸಾವನ್ನಪ್ಪಿದಾಗ ಅವರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡುವ ಸರ್ಕಾರದ ತೀರ್ಮಾನ ಸಕಾಲಿಕ. ದಲಿತ ಸಮುದಾಯಗಳ ಬಗ್ಗೆ ಅಸಡ್ಡೆ, ಅಸಹಕಾರ ಮತ್ತು ದೌರ್ಜನ್ಯ ಮನಸ್ಥಿತಿ ಸಮಾಜದಲ್ಲಿ ಕಡಿಮೆ ಆಗಿಲ್ಲ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡುವ ತೀರ್ಮಾನ ಮಾಡಿರುವುದು ಉತ್ತಮ ನಿರ್ಧಾರ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.