
ಜನಮುಖಿ ಶೋಷಿತರ ಪರವಾದ ವೇದಿಕೆ ಶುಕ್ರವಾರ ಆಯೋಜಿಸಿದ್ದ ಗಾಂಧೀಜಿ ಅವರ ‘ನನ್ನ ಸತ್ಯಾನ್ವೇಷಣೆ’ ಕೃತಿಯ ಶತಮಾನೋತ್ಸವ ಹಾಗೂ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್, ವಿ.ಎಸ್.ಆರಾಧ್ಯ, ರಘುನಾಥ ನಾಯ್ಡು ಅವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಅಹಿಂಸೆ, ಸಹಿಷ್ಣುತೆಯನ್ನೇ ಮುಖ್ಯ ಅಸ್ತ್ರ ಮಾಡಿಕೊಂಡು ದೇಶಕ್ಕಾಗಿ ಹೋರಾಟ ಮಾಡಿದ ಮಹಾತ್ಮ ಗಾಂಧಿ ಅವರನ್ನು ವಿಚಾರಗಳ ಹೆಸರಲ್ಲಿ ಕೊಲ್ಲಲಾಗುತ್ತಿದೆ’ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಜನಮುಖಿ ಶೋಷಿತರ ಪರವಾದ ವೇದಿಕೆ ಪುರಭವನದಲ್ಲಿ ಆಯೋಜಿಸಿದ್ದ ಗಾಂಧೀಜಿ ಅವರ ‘ನನ್ನ ಸತ್ಯಾನ್ವೇಷಣೆ’ ಕೃತಿಯ ಶತಮಾನೋತ್ಸವ ಹಾಗೂ ಹುತಾತ್ಮ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಸಮಾನತೆ, ಸಾಮರಸ್ಯ, ವಿಭಜನೆ ಕುರಿತು ಗಾಂಧೀಜಿ ಅವರ ಚಿಂತನೆಗಳಲ್ಲಿ ಸ್ಪಷ್ಟತೆಯಿತ್ತು. ಕೆಲವೊಂದು ಬಾರಿ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವ ಅವರ ಗುಣದಿಂದಲೇ ದೊಡ್ಡ ನಾಯಕರಾದರು. ಅವರ ವಿಚಾರ ಒಪ್ಪದೇ ಭಿನ್ನಾಭಿಪ್ರಾಯ ಇಟ್ಟುಕೊಳ್ಳುವ ಬದಲು ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ವಿಚಾರಗಳ ಹೆಸರಿನಲ್ಲಿ ಇದು ಮುಂದುವರಿದಿದೆ’ ಎಂದು ಹೇಳಿದರು.
‘ಆಡಳಿತವನ್ನು ಟೀಕಿಸಿದರೆ ದೇಶದ್ರೋಹಿಗಳು ಎನ್ನುವ ಪಟ್ಟ ಕಟ್ಟುವ ಮನಸ್ಥಿತಿ ಬೆಳೆದಿದೆ. ಅಸಹಿಷ್ಣುತೆಯನ್ನು ಬಿತ್ತುವ ಕೆಲಸ ನಡೆದಿದೆ. ಇದರಿಂದ ಹೊರ ಬರಲು ಗಾಂಧೀಜಿ ಅವರ ನನ್ನ ಸತ್ಯಾನ್ವೇಷಣೆ ಕೃತಿ, ಅವರ ಒಳನೋಟ, ಚಿಂತನೆಗಳು ಮಾರ್ಗಸೂಚಿಯಾಗಬಲ್ಲವು’ ಎಂದರು.
ವಿಧಾನ ಪರಿಷತ್ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ‘ಹೊಸ ತಲೆಮಾರಿನವರು ಗಾಂಧೀಜಿ, ಅಂಬೇಡ್ಕರ್ ಅವರನ್ನು ಮರೆಯುತ್ತಿದ್ದಾರೆ. ಅವರ ವಿಚಾರಗಳೇ ಯುವ ಸಮುದಾಯಕ್ಕೆ ಬೇಡವಾಗುತ್ತಿದೆ’ ಎಂದರು.
ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಕೆಪಿಸಿಸಿ ಉಪಾಧ್ಯಕ್ಷ ಆರ್.ಮಂಜುನಾಥ್, ಕಾಂಗ್ರೆಸ್ ಮುಖಂಡ ರಘುನಾಥ ನಾಯ್ಡು, ಜನಮುಖಿ ವೇದಿಕೆ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ರಘುನಂದನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.