ಬೆಂಗಳೂರು: ಡಿಜಿಟಲ್ ವೇದಿಕೆಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ‘ಬ್ಲಾಕ್ಚೈನ್’ ನಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಜಲಮಂಡಳಿ ಚಿಂತನೆ ನಡೆಸಿದೆ.
‘ಜಲಮಂಡಳಿಯ ನೀರಿನ ಸಂಪರ್ಕ ಅರ್ಜಿ ಸ್ವೀಕಾರದ ಆನ್ಲೈನ್ ಜಾಲತಾಣದಿಂದ ದತ್ತಾಂಶ ಕದಿಯುವ ಪ್ರಯತ್ನಗಳು ನಡೆದಿವೆ. ಈ ಕಾರಣದಿಂದ ಇಂಥ ತಂತ್ರಜ್ಞಾನಗಳ ಅಳವಡಿಕೆಗೆ ಮುಂದಾಗಿದ್ದೇವೆ’ ಎಂದು ಮಂಡಳಿ ಅಧ್ಯಕ್ಷ ವಿ.ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
‘ಏಪ್ರಿಲ್ 11 ರಂದು ಬೆಳಿಗ್ಗೆ ಜಲಮಂಡಳಿಯ ನೀರಿನ ಸಂಪರ್ಕಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಜಾಲತಾಣದಿಂದ ದತ್ತಾಂಶ ಕದಿಯುವ ಪ್ರಯತ್ನ ನಡೆದಿತ್ತು. ಈ ಕುರಿತು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಮಾಹಿತಿ (ಸಿಇಆರ್ಟಿ–ಐಎನ್) ನೀಡಿದ ತಕ್ಷಣ, ನಮ್ಮ ಎಂಜಿನಿಯರ್ಗಳು ಸೈಬರ್ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪ್ರಾಥಮಿಕ ಹಂತದ ತನಿಖೆ ಪ್ರಕಾರ, ಜಾಲತಾಣದಲ್ಲಿದ್ದ ಗ್ರಾಹಕರಿಗೆ ಸಂಬಂಧಿಸಿದ ಸೂಕ್ಷ್ಮವಾದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ’ ಎಂದು ಅವರು ವಿವರಿಸಿದ್ದಾರೆ.
‘ಬೆಂಗಳೂರು ಜಲಮಂಡಳಿಯ ಗ್ರಾಹಕರ ದತ್ತಾಂಶಗಳನ್ನು ರಾಜ್ಯ ಸರ್ಕಾರ ನಿರ್ವಹಿಸುವಂತಹ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಸಂಗ್ರಹಿಸಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಈ ಜಾಲತಾಣದಲ್ಲಿದ್ದ ದತ್ತಾಂಶಗಳನ್ನು ಹೆಚ್ಚು ಸುರಕ್ಷಿತ ಕೇಂದ್ರೀಕೃತ ಸರ್ವರ್ಗಳಿಗೆ ವರ್ಗಾಯಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.