ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಚು ಮಾಡಿದ ಆರೋಪಕ್ಕೆ ಒಳಗಾಗಿದ್ದ ಫಸಿ ಮೊಹಮ್ಮುದ್ ಎಂಬಾತನಿಗೆ ಇಲ್ಲಿನ ಎನ್ಐಎ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸ್ಫೋಟ ಪ್ರಕರಣದಲ್ಲಿ ಈತ 14ನೇ ಆರೋಪಿ. ಚಿನ್ನಸ್ವಾಮಿ ಕ್ರೀಡಾಂಗಣದ ಸ್ಫೋಟಕ್ಕೆ ದೆಹಲಿ, ಧನ್ಬಾಗ್ಗಳಲ್ಲಿ ಸಂಚು ರೂಪಿಸಿದ್ದು, ತುಮಕೂರಿನಲ್ಲಿ ಬಾಂಬ್ ತಯಾರಿಸಿದ್ದಾಗಿ ಈತ ಒಪ್ಪಿಕೊಂಡ ಬಳಿಕ ನ್ಯಾಯಾಧೀಶ ವೆಂಕಟೇಶ್ ಹುಲಗಿ ಶಿಕ್ಷೆ ವಿಧಿಸಿದರು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎ. ರವೀಂದ್ರ ವಾದಿಸಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2010ರ ಏಪ್ರಿಲ್ 14ರಂದು ಐಪಿಎಲ್ ಪಂದ್ಯಾವಳಿ ನಡೆಯುವ ಸಂದರ್ಭದಲ್ಲಿ ಐದು ಬಾಂಬ್ಗಳನ್ನು ಇಡಲಾಗಿತ್ತು. ಇದರಲ್ಲಿ ಎರಡು ಬಾಂಬ್ ಸ್ಪೋಟಿಸಿದ್ದವು. ಉಳಿದ ಮೂರು ವಿಫಲಗೊಂಡಿದ್ದವು.
ಗೇಟ್ ನಂಬರ್ ಒಂದರಲ್ಲಿ ಸಿಕ್ಕ ಮೂರು ಕೂದಲಿನ ಆಧಾರದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಯಾಸಿನ್ ಭಟ್ಕಳ್ ಒಳಗೊಂಡಂತೆ 14 ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದು, 9 ಮಂದಿಯನ್ನು ಬಂಧಿಸಲಾಗಿದೆ. ಉಳಿದವರು ತಲೆ ಮರೆಸಿಕೊಂಡಿದ್ದಾರೆ.
ಗೋಹರ್ ಅಜೀಜ್ ಖೊಮೆನಿ, ಕಮಲ ಹಸನ್ ಹಾಗೂ ಮೊಹಮದ್ ಕಪಿಲ್ ಅಖ್ತರ್ ಅವರಿಗೆ ಈಗಾಗಲೇ ನ್ಯಾಯಾಲಯದಿಂದ ಜೈಲು ಶಿಕ್ಷೆ ಆಗಿದೆ. ಎರಡನೇ ಆರೋಪಿ ಸಿದ್ದಿಕ್ ನಿಧನ ಹೊಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.