ADVERTISEMENT

ಮೆಟ್ರೊ ನಿಲ್ದಾಣದಲ್ಲಿ ಹದಗೆಟ್ಟ ಬೇರಿಂಗ್‌, ಪಿಲ್ಲರ್‌ಗಳು ಬಿರುಕು ಬಿಡುವ ಸಂಭವ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 18:58 IST
Last Updated 2 ಆಗಸ್ಟ್ 2019, 18:58 IST
   

ಬೆಂಗಳೂರು:‘ಇಂದಿರಾನಗರ ಮೆಟ್ರೊ ನಿಲ್ದಾಣದಲ್ಲಿ ಬೇರಿಂಗ್‌ ಹದಗೆಟ್ಟಿದ್ದು, ಪಿಲ್ಲರ್‌ಗಳು ಬಿರುಕು ಬಿಡುವ ಸಂಭವವಿದೆ’ ಎಂದು ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಆರೋಪಿಸಿದ್ದಾರೆ.

'ಇಂದಿರಾನಗರ ನಿಲ್ದಾಣದ ಪಿಲ್ಲರ್ ಸಂಖ್ಯೆ 8ರಲ್ಲಿ ಬೇರಿಂಗ್‌ ಹದಗೆಟ್ಟಿದೆ. ಬೇರಿಂಗ್‌ ಹಾಳಾಗಿದ್ದನ್ನು ನಿರ್ಲಕ್ಷಿಸಿದ ಕಾರಣದಿಂದಲೇ ಈ ಹಿಂದೆ ಟ್ರಿನಿಟಿ ನಿಲ್ದಾಣದ ಪಿಲ್ಲರ್ ಸಂಖ್ಯೆ 156ರಲ್ಲೂ ರಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಬೈಯಪ್ಪನಹಳ್ಳಿಯ ಪಿಲ್ಲರ್‌ ಸಂಖ್ಯೆ 2 ಮತ್ತು 3ರಲ್ಲಿ ಈಗಾಗಲೇ ಬಿರುಕು ಕಾಣಿಸಿಕೊಂಡಿದೆ’ ಎಂದು ಅವರು ದೂರಿದರು.

‘ರೈಲಿನ ತೂಕ ನೇರವಾಗಿ ಪಿಲ್ಲರ್‌ ಮೇಲೆ ಬೀಳದಿರಲು ಬೇರಿಂಗ್‌ ಅಳವಡಿಸಲಾಗಿರುತ್ತದೆ. ಬೇರಿಂಗ್‌ ಹದಗೆಟ್ಟು ರೈಲಿನ ಸಂಪೂರ್ಣ ಭಾರ ಪಿಲ್ಲರ್‌ ಮೇಲೆ ಬಿದ್ದರೆ, ಅದು ಬಿರುಕು ಬಿಡುವ ಸಾಧ್ಯತೆ ಇರುತ್ತದೆ. ಸದ್ಯ, ಬೇರಿಂಗ್‌ ಹದಗೆಟ್ಟಿರುವುದು ನಿಜ. ಆದರೆ, ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿಲ್ಲ’ ಎಂದು ನಿಲ್ದಾಣದ ಸಿಬ್ಬಂದಿ ಹೇಳಿದರು.

ADVERTISEMENT

ಊಹಾಪೋಹ: ‘ಯಾವುದೇ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿಲ್ಲ. ಎಲ್ಲವೂ ಊಹಾಪೋಹ’ ಎಂದುಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ತಿಳಿಸಿದರು.

‘ಎಂದಿನಂತೆನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ಮಹಾತ್ಮಗಾಂಧಿ ಮೆಟ್ರೊ ನಿಲ್ದಾಣದವರೆಗೆ ಆ.3ರ ರಾತ್ರಿ 9.30ರಿಂದ, 4ರ ಬೆಳಿಗ್ಗೆ 11ರವರೆಗೆ ಮೆಟ್ರೊ ರೈಲು ಸಂಚಾರವಿರುವುದಿಲ್ಲ’ ಎಂದು ಅವರು ತಿಳಿಸಿದರು.

3ರಂದು, ದಿನದ ಕೊನೆಯ ರೈಲು ಬೈಯಪ್ಪನಹಳ್ಳಿಯಿಂದ ರಾತ್ರಿ 9.30ಕ್ಕೆ ಹಾಗೂ ಮೈಸೂರು ರಸ್ತೆ ನಿಲ್ದಾಣದಿಂದ ರಾತ್ರಿ 9ಕ್ಕೆ ಹೊರಡಲಿದೆ.

ನೇರಳೆ ಮಾರ್ಗದ ಮಹಾತ್ಮ ಗಾಂಧಿ ರಸ್ತೆ ನಿಲ್ದಾಣದಿಂದ – ಮೈಸೂರು ರಸ್ತೆ ನಿಲ್ದಾಣದವರೆಗೆ ರೈಲುಗಳು ಎಂದಿನಂತೆ ಸಂಚರಿಸಲಿವೆ. ಅದೇ ರೀತಿ, ಹಸಿರು ಮಾರ್ಗದ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.