ADVERTISEMENT

ವೇತನ ಪಾವತಿ: ಕಾರ್ಮಿಕರ ಪ್ರತಿಭಟನೆಯಿಂದ ಎಚ್ಚೆತ್ತ ಮೆಟ್ರೊ ನಿಗಮ

ಜಾರ್ಖಂಡ್‌ಗೆ ಕಳುಹಿಸಿಕೊಡಲು ಒತ್ತಾಯ: ಪೊಲೀಸ್‌ ಮಧ್ಯಪ್ರವೇಶ

​ಪ್ರಜಾವಾಣಿ ವಾರ್ತೆ
Published 4 ಮೇ 2020, 2:31 IST
Last Updated 4 ಮೇ 2020, 2:31 IST
ಊರಿಗೆ ಕಳುಹಿಸಿಕೊಡುವಂತೆ ಪ್ರತಿಭಟನೆ ನಡೆಸಿದ ಉತ್ತರ ಭಾರತದ ಕಾರ್ಮಿಕರು
ಊರಿಗೆ ಕಳುಹಿಸಿಕೊಡುವಂತೆ ಪ್ರತಿಭಟನೆ ನಡೆಸಿದ ಉತ್ತರ ಭಾರತದ ಕಾರ್ಮಿಕರು   

ಬೊಮ್ಮನಹಳ್ಳಿ: ವೇತನ ಪಾವತಿಸಿಲ್ಲ ಹಾಗೂ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿಲ್ಲ ಎಂದು ದೂರಿ ‘ನಮ್ಮ ಮೆಟ್ರೊ’ಕಾರ್ಮಿಕರು ನಡೆಸಿದ ಪ್ರತಿಭಟನೆಯಿಂದ ಎಚ್ಚೆತ್ತ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಅಧಿಕಾರಿಗಳು ಏಪ್ರಿಲ್‌ ತಿಂಗಳ ವೇತನ ಪಾವತಿ ಮಾಡಿದ್ದಾರೆ. ಅಲ್ಲದೆ,ಬಿಹಾರದ ಕಾರ್ಮಿಕರನ್ನು ಎರಡು ತಂಡಗಳಲ್ಲಿ ಊರುಗಳಿಗೆ ಕಳುಹಿಸಿಕೊಡಲಾಗಿದೆ.

ದಿನಬಳಕೆಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಿ ಕಾರ್ಮಿಕರ ಆತಂಕ ಹೋಗಲಾಡಿಸುವ ಪ್ರಯತ್ನ ನಡೆಸಿದ್ದಾರೆ. ಕಾರ್ಮಿಕರ ಪ್ರತಿಭಟನೆ ಕುರಿತು ‘ಪ್ರಜಾವಾಣಿ’ಯಲ್ಲಿ ಶನಿವಾರ ವರದಿ ಪ್ರಕಟವಾಗಿತ್ತು.

ಪೊಲೀಸರ ಮಧ್ಯಪ್ರವೇಶ: ‘ಬಿಹಾರಿ ಕಾರ್ಮಿಕರನ್ನು ಮಾತ್ರ ಊರಿಗೆ ಕಳುಹಿಸಲಾಗಿದೆ, ನಮ್ಮನ್ನೂ ಊರಿಗೆ ಕಳುಹಿಸುವ ವ್ಯವಸ್ಥೆ ಬೇಗ ಆಗಬೇಕು’ ಎಂದು ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಕಾರ್ಮಿಕರು ಗಲಾಟೆಗೆ ಮುಂದಾಗಿದ್ದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ADVERTISEMENT

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ‘ಎಲ್ಲರನ್ನೂ ಹಂತ ಹಂತವಾಗಿ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ' ಎಂದು ತಿಳಿ ಹೇಳಿದ್ದರಿಂದ ಸಮಾಧಾನಗೊಂಡ ಕಾರ್ಮಿಕರು, ಪೊಲೀಸರೊಂದಿಗೆ ಸಹಕರಿಸುವುದಾಗಿ ಒಪ್ಪಿ, ಪ್ರತಿಭಟನೆ ಹಿಂತೆಗೆದುಕೊಂಡರು.

ಸ್ಥಳಕ್ಕೆ ಭೇಟಿ ನೀಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್, ‘ಎಲ್ಲ ಕಾರ್ಮಿಕರಿಗೆ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ವೇತನ ಪಾವತಿಸಲಾಗಿದೆ. ಕಾರ್ಮಿಕರೊಂದಿಗೆ ಸಮಾಲೋಚಿಸಿ, ಎಲ್ಲರನ್ನೂ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಮೆಟ್ರೊ ಸಂಚಾರ ನಿರ್ಬಂಧ ಮುಂದುವರಿಕೆ
ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದ್ದ ಮೆಟ್ರೊ ರೈಲು ಸಂಚಾರ ಅವಧಿಯನ್ನು ಸೋಮ ವಾರದಿಂದ ಮುಂದಿನ ಎರಡು ವಾರದವರೆಗೆ ವಿಸ್ತರಿಸಲಾಗಿದೆ.

ಮೇ 3ರವರೆಗೆ ಲಾಕ್‌ಡೌನ್‌ ಘೋಷಿಸಿದ್ದರಿಂದ ಅಲ್ಲಿಯವರೆಗೆ ಸಂಚಾರ ಸ್ಥಗಿತಗೊಳಿಸಿರುವುದಾಗಿ ಬಿಎಂಆರ್‌ಸಿಎಲ್‌ ಈ ಮೊದಲು ತಿಳಿಸಿತ್ತು. ರೈಲುಗಳನ್ನು ಸುಸ್ಥಿತಿಯಲ್ಲಿ ಮತ್ತು ಪವರ್‌ ಮೋಡ್‌ನಲ್ಲಿ ಇರಿಸಲು ಒಂದು ಪರೀಕ್ಷಾರ್ಥ ರೈಲು ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.