ADVERTISEMENT

ನಮ್ಮ ಮೆಟ್ರೊ: ಐದು ಸಾವಿರ ಮರಗಳಿಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 20:24 IST
Last Updated 24 ಜುಲೈ 2020, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೊರವರ್ತುಲ ರಸ್ತೆಯ ಮೂಲಕ ಸಿಲ್ಕ್‌ ಬೋರ್ಡ್‌ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕಾಗಿ ಐದು ಸಾವಿರಕ್ಕೂ ಹೆಚ್ಚು ಮರಗಳು ಬಲಿಯಾಗಲಿವೆ.

ಈ ಕುರಿತು ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನ ವರದಿ ಸಿದ್ಧಪಡಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌), 36.44 ಕಿ.ಮೀ. ಉದ್ದದ ಈ ಮಾರ್ಗಕ್ಕೆ (ರೀಚ್‌ 2ಬಿ) 3,541 ಮರಗಳನ್ನು ಕತ್ತರಿಸಬೇಕಾಗಿದ್ದು, 1,853 ಮರಗಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ಹೇಳಿದೆ. ಹೊರವರ್ತುಲ ರಸ್ತೆ ಮಾರ್ಗದಲ್ಲಿ 1,248 ಮರಗಳಿಗೆ ಕುತ್ತು ಬರಲಿದೆ.

ಮಾರ್ಗದ ಉದ್ದ ಮತ್ತು ಯೋಜನೆಯ ಗಾತ್ರಕ್ಕೆ ಹೋಲಿಸಿದರೆ, ಹಾನಿಗೀಡಾಗುತ್ತಿರುವ ಮರಗಳ ಸಂಖ್ಯೆ ತೀರಾ ಕಡಿಮೆ ಎಂದು ವರದಿ ಹೇಳಿದೆ. ಹೆಚ್ಚು ಮರಗಳಿಗೆ ಹಾನಿಯಾಗದಂತೆ ಮಾರ್ಗ ವಿನ್ಯಾಸಗೊಳಿಸಲಾಗಿದೆ ಎಂದೂ ವರದಿಯಲ್ಲಿದೆ.

ADVERTISEMENT

ಉದ್ದೇಶಿತ ಮೆಟ್ರೊ ಮಾರ್ಗದ ವಿಭಜಕಗಳ ಮಧ್ಯ ಭಾಗದಲ್ಲಿ ಅಥವಾ ವಿಭಜಕದಲ್ಲಿ ಆಲಂಕಾರಿಕ ಗಿಡಗಳನ್ನು ನೆಡುವ ಉದ್ದೇಶವನ್ನೂ ಬಿಎಂಆರ್‌ಸಿಎಲ್‌ ಹೊಂದಿದೆ.

ಕಟ್ಟಡಗಳೂ ಸ್ವಾಧೀನ:ವಿಮಾನ ನಿಲ್ದಾಣ ಮಾರ್ಗಕ್ಕಾಗಿ ವಾಣಿಜ್ಯ ಮತ್ತು ವಸತಿ ಸೇರಿದಂತೆ 42 ಕಟ್ಟಡಗಳನ್ನು ಹಾಗೂ 15 ಕಡೆ ಖಾಲಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹೊರವರ್ತುಲ ರಸ್ತೆ ಮಾರ್ಗಕ್ಕಾಗಿ 19 ವಸತಿ ಹಾಗೂ 86 ವಾಣಿಜ್ಯ ಕಟ್ಟಡಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.