ADVERTISEMENT

ಬಿಎಂಶ್ರೀ ಪ್ರತಿಮೆ ವಿರೂಪ ಎಂ.ಎಸ್.ಮೂರ್ತಿ ಬೇಸರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 22:21 IST
Last Updated 3 ಜನವರಿ 2021, 22:21 IST
ಬಣ್ಣ ಬಡಿಯಲಾದ ಬಿಂಎಶ್ರೀ ಅವರ ಕಂಚಿನ ಪ್ರತಿಮೆ
ಬಣ್ಣ ಬಡಿಯಲಾದ ಬಿಂಎಶ್ರೀ ಅವರ ಕಂಚಿನ ಪ್ರತಿಮೆ   

ಬೆಂಗಳೂರು: ‘ಬಸವನಗುಡಿ ನ್ಯಾಷನಲ್ ಕಾಲೇಜು ವೃತ್ತದಲ್ಲಿ ಬಿ.ಎಂ.ಶ್ರೀ ಅವರ ಪ್ರತಿಮೆ ಇರುವ ಸ್ಥಳವನ್ನು ಪುನರುಜ್ಜೀವನಗೊಳಿಸುವ ವೇಳೆ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿಮೆ ಇರುವ ಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಒದಗಿಸಬೇಕು ಎಂದು ರಾಜ್ಯಸಭೆ ಸದಸ್ಯ ಡಾ.ಎಲ್. ಹನುಮಂತಯ್ಯ ಅವರು ಬಿಬಿಎಂಪಿ ಆಯುಕ್ತರು, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಮತ್ತು ಸಂಸದ ತೇಜಸ್ವಿ ಸೂರ್ಯ ಅವರಿಗೆ ಪತ್ರ ಬರೆದಿದ್ದರು. ಕಳೆದ ಡಿ.31ರಂದು ಬಿಬಿಎಂಪಿಯು ಸ್ಥಳವನ್ನು ಸ್ವಚ್ಛಗೊಳಿಸಿ, ಅಲ್ಲಿ ಅಗತ್ಯ ಸೌಲಭ್ಯ ಒದಗಿಸಿದೆ. ಈ ವೇಳೆ ಕಂಚಿನ ಪ್ರತಿಮೆಗೆ ಕಟ್ಟಡ ಸಾಮಗ್ರಿಗೆ ಬಳಸುವ ಬಣ್ಣವನ್ನು ಹಚ್ಚಲಾಗಿದೆ.

‘ಡಾ.ಚಿದಾನಂದಮೂರ್ತಿ ಅವರ ನೇತೃತ್ವದಲ್ಲಿ ಬಿಎಂಶ್ರೀ ಅವರ ಕಂಚಿನ ಭಾವಶಿಲ್ಪವನ್ನು ಸ್ಥಾಪಿಸಲಾಗಿದೆ. ನಿರ್ಲಕ್ಷ್ಯ
ಕ್ಕೊಳಗಾಗಿದ್ದ ಸ್ಥಳಕ್ಕೆ ಈಗ ಸೌಲಭ್ಯ ಒದಗಿಸಿರುವುದು ಸ್ವಾಗತಾರ್ಹ. ಆದರೆ, ಈ ಕಾರ್ಯದ ಕೇಂದ್ರ ಬಿಂದುವಾದ ಬಿಎಂಶ್ರೀ ಅವರ ಭಾವ ಶಿಲ್ಪವು ವಿರೂಪಗೊಂಡಿದೆ. ಇದು ಯಾರ ಗಮನಕ್ಕೂ ಬರದಿರುವುದು ಆಶ್ಚರ್ಯವನ್ನುಂಟುಮಾಡಿದೆ. ಕಂಚಿನ ಭಾವ
ಶಿಲ್ಪಕ್ಕೆ ಯಾವ ಬಣ್ಣವನ್ನೂ ಬಳಿಯಬಾರದು. ಕಲಾಕೃತಿಯ ನಿರ್ವಹಣೆಯ ಸಂದರ್ಭದಲ್ಲಿ ಕಲಾವಿದರ ಸಲಹೆ ಪಡೆದು, ಮಾರ್ಪಾಡು ಮಾಡಬೇಕಾದದ್ದು ಪಾಲಿಕೆಯ ಜವಾಬ್ದಾರಿ. ಭಾವ ಶಿಲ್ಪಕ್ಕೆ ಕಟ್ಟಡ ಸಾಮಗ್ರಿಯ ಎನಾಮಲ್ ಬಣ್ಣ ಬಳಿದು, ಕೃತಿಯನ್ನು ಅಂದಗೆಡಿಸಿದ್ದಾರೆ’ ಎಂದು ಎಂ.ಎಸ್. ಮೂರ್ತಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.