ಬೆಂಗಳೂರು: ವಜಾಗೊಂಡಿದ್ದ ನೌಕರರ ಪುನರ್ ನೇಮಕ ಪ್ರಕ್ರಿಯೆಯನ್ನು ಬಿಎಂಟಿಸಿ ಆರಂಭಿಸಿದೆ. ಮೊದಲ ಹಂತದಲ್ಲಿ 62 ಸಿಬ್ಬಂದಿಗೆ ಮರು ನೇಮಕ ಪತ್ರಗಳನ್ನು ವಿತರಣೆ ಮಾಡಿತು.
ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ ಅವರು ನೌಕರರಿಗೆ ನೇಮಕಾತಿ ಆದೇಶ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ‘ಕಾರ್ಮಿಕ ನ್ಯಾಯಾಲಯದ ಲೋಕ ಅದಾಲತ್ನಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಂಡಿರುವ ನೌಕರರಿಗೆ ಆದೇಶ ಪತ್ರಗಳನ್ನು ನೀಡಲಾಗುತ್ತಿದೆ. ಸದ್ಯಕ್ಕೆ 62 ನೌಕರರ ಪ್ರಕರಣ ಇತ್ಯರ್ಥವಾಗಿದೆ’ ಎಂದರು.
‘ವಜಾಗೊಂಡಿರುವ ಎಲ್ಲ ಸಿಬ್ಬಂದಿಯೂ ಲೋಕ ಅದಾಲತ್ ಮೂಲಕ ಮರು ನೇಮಕಕ್ಕೆ ಅವಕಾಶ ಇದೆ. ನ್ಯಾಯಾಲಯದ ಆದೇಶದಂತೆ ಅವರಿಗೆ ನೇಮಕ ಪತ್ರಗಳನ್ನು ವಿತರಿಸಲಾಗುವುದು. ಆದ್ದರಿಂದ ಎಲ್ಲರೂ ವಕೀಲರ ಮೂಲಕ ಲೋಕ ಅದಾಲತ್ ಮುಂದೆ ಅರ್ಜಿ ಸಲ್ಲಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಹೇಳಿದರು.
ಎಲ್ಲವೂ ಕಾನೂನಿನ ಪ್ರಕಾರವೇ ನಡೆಯುತ್ತಿದೆ. ನ್ಯಾಯಾಲಯದ ಆದೇಶದಂತೆ ಸಂಸ್ಥೆ ನಡೆದುಕೊಳ್ಳುತ್ತಿದೆ. ನೌಕರರಿಗೆ ತೊಂದರೆ ನೀಡುವ ಉದ್ದೇಶ ಸಂಸ್ಥೆಗೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮಾತನಾಡಿ, ‘ಲೋಕ ಅದಾಲತ್ನಲ್ಲಿ ಇನ್ನೂ 300ಕ್ಕೂ ಹೆಚ್ಚು ಅರ್ಜಿಗಳು ವಿಚಾರಣೆ ನಡೆಯುತ್ತಿವೆ. ನಿಗಮದ ವಕೀಲರು ತಪ್ಪದೆ ಹಾಜರಾಗಿ ಪ್ರಕರಣ ಇತ್ಯರ್ಥಪಡಿಸಲು ಸಹಕರಿಸುತ್ತಿದ್ದಾರೆ. ಇತ್ಯರ್ಥ ಆದವರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿಳಂಬ ಮಾಡದೆ ನೀಡಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.