
ಬೆಂಗಳೂರು: ಸೇವಾವಧಿಯಲ್ಲೇ ಮೃತಪಟ್ಟ ಬಿಎಂಟಿಸಿಯ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಆದೇಶವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ವಿತರಿಸಿದರು.
‘ಅನುಕಂಪದ ಆಧಾರದ ಮೇಲೆ ಉದ್ಯೋಗದ ನಿರೀಕ್ಷಣೆಯಲ್ಲಿದ್ದ ಮೃತರ ಅವಲಂಬಿತರ ಪೈಕಿ 334 ಮಂದಿ ವಿವಿಧ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ. ಇಂದು 40 ಕಿರಿಯ ಸಹಾಯಕ ಹಾಗೂ 42 ಕರ್ನಾಟಕ ರಾಜ್ಯ ಸಾರಿಗೆ ಕಾನ್ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ನೀಡಲಾಗುತ್ತಿದೆ. ಒಟ್ಟು ಅನುಕಂಪ ಆಧಾರದ ಮೇಲೆ ನೇಮಕಗೊಂಡವರ ಸಂಖ್ಯೆ 416ಕ್ಕೆ ಏರಿಕೆಯಾಗಿದೆ’ ಎಂದು ಸಚಿವರು ತಿಳಿಸಿದರು.
ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಲು 2,500 ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ನಿಯಮಾನುಸಾರ ಭರ್ತಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಾಮಾಣಿಕತೆಗೆ ಪ್ರಶಂಸೆ: ಪ್ರಯಾಣಿಕರೊಬ್ಬರು ಯುಪಿಐ ಆಧಾರಿತ ಆ್ಯಪ್ ಮೂಲಕ ₹ 6 ಪಾವತಿಸುವ ಬದಲು ₹ 62,316 ಪಾವತಿಸಿದ್ದರು. ಒಂದು ವಾರದ ಒಳಗೆ ಮರುಪಾವತಿಗೆ ಕ್ರಮ ಕೈಗೊಂಡಿದ್ದ ಘಟಕ ವ್ಯವಸ್ಥಾಪಕಿ ಚಂದ್ರಕಲಾ ಬಿ.ಆರ್. ಚಾಲಕ-ಕಂ-ನಿರ್ವಾಹಕ ಕೆ. ಪುಟ್ಟಸ್ವಾಮಿ ಅವರಿಗೆ ₹ 2,000 ನಗದು ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಮೌಲ್ಯಯುತ ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಹೊಂದಿದ್ದ ಬ್ಯಾಗ್ ಅನ್ನು ಮರೆತು ಹೋಗಿದ್ದ ಪ್ರಯಾಣಕರಿಗೆ ಬ್ಯಾಗ್ ಹಿಂತಿರುಗಿಸಿದ್ದ ನಿರ್ವಾಹಕ ಶ್ರೀಧರ್ ಎಸ್., ಚಾಲಕ ನಟರಾಜನ್ ಎಂ., ಸಹಾಯಕ ಸಂಚಾರ ನಿರೀಕ್ಷಕ ರಾಮಪ್ಪ ಜ್ಯೋತಿ ಅವರಿಗೂ ₹ 2,000 ನಗದು ಮತ್ತು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
₹ 10 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರೆತ ಪ್ರಯಾಣಿಕ ಮಹಿಳೆಗೆ ಬ್ಯಾಗ್ ಹಿಂತಿರುಗಿಸಿದ ನಿರ್ವಾಹಕಿ ಗಂಗಾ ಪೂಜಾರಿ, ಚಾಲಕ ಗೋವರ್ಧನ್ ಅವರಿಗೆ ₹1,000 ಮತ್ತು ಪ್ರಶಂಸನಾ ಪತ್ರ ನೀಡಲಾಯಿತು.
ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ, ಉಪಾಧ್ಯಕ್ಷ ನಿಕೇತ್ರಾಜ್ ಎಂ., ವ್ಯವಸ್ಥಾಪಕ ನಿರ್ದೇಶಕ ಕೆ.ಬಿ. ಶಿವಕುಮಾರ್, ನಿರ್ದೇಶಕರಾದ ಅಬ್ದುಲ್ ಅಹದ್, ಶಿಲ್ಪಾ ಎಂ., ಕೆನರಾ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಕೆ. ಕಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಪ ಪ್ರಧಾನ ವ್ಯವಸ್ಥಾಪಕ ಅಲೋಕ್ ಕುಮಾರ್ ಚತುರ್ವೇದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.