ಬೆಂಗಳೂರು: ‘ಬಿಎಂಟಿಸಿ ಬಸ್ಗಳ ನಿರ್ವಾಹಕರು ಇಲ್ಲಿಗೆ ವಲಸೆ ಬಂದ ಅನ್ಯಭಾಷಿಕರೊಂದಿಗೂ ಕನ್ನಡದಲ್ಲಿ ವ್ಯವಹರಿಸಬೇಕು. ಇದರಿಂದ ಕನ್ನಡ ಕಲಿಕೆ ಸಾಧ್ಯವಾಗುತ್ತದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದ್ದಾರೆ.
ಈ ಬಗ್ಗೆ ಅವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ‘ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಂದ ಬೆಂಗಳೂರಿಗೆ ಬಂದವರು ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿಲ್ಲ. ಅವರು ಬಸ್ಗಳಲ್ಲಿ ಪ್ರಯಾಣಿಸುವಾಗ ನಿರ್ವಾಹಕರು ಅವರದ್ದೇ ಭಾಷೆಯಲ್ಲಿ ಸೇವೆ ನೀಡಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ’ ಎಂದು ಹೇಳಿದ್ದಾರೆ.
‘ಬೆಂಗಳೂರಿನಲ್ಲಿ ವಲಸಿಗರು ಸಂಚಾರಕ್ಕಾಗಿ ಬಿಎಂಟಿಸಿ ಬಸ್ಗಳನ್ನೇ ಅವಲಂಬಿಸುತ್ತಾರೆ. ಅನ್ಯಭಾಷಿಕರಿಗೆ ಕನ್ನಡಿಗರೇ ಅವರ ಭಾಷೆಯಲ್ಲಿ ಸೇವೆ ಒದಗಿಸಿದರೆ ಕನ್ನಡ ಕಲಿಯುವ ಪ್ರಕ್ರಿಯೆಯಿಂದ ದೂರಮಾಡಿದಂತೆ ಆಗುತ್ತದೆ. ಕನ್ನಡವನ್ನು ಕಲಿಯದೆಯೂ ಜೀವನ ನಡೆಸಬಹುದು ಎಂಬ ಸನ್ನಿವೇಶವನ್ನು ನಾವೇ ಸೃಷ್ಟಿಸುತ್ತಿರುವುದು ನೋವಿನ ಸಂಗತಿ. ಆದ್ದರಿಂದ ಅನ್ಯ ಭಾಷಿಕರೊಂದಿಗೆ ಕನ್ನಡದಲ್ಲಿಯೇ ನಿರ್ವಾಹಕರು ವ್ಯವಹರಿಸುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.