ADVERTISEMENT

ಹಳಿ ಮೇಲೆ ಮುಂಡ, ಲಾರಿಯಲ್ಲಿ ರುಂಡ ಪತ್ತೆಯಾದ ಪ್ರಕರಣ: ಬಿಎಂಟಿಸಿ ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 6:17 IST
Last Updated 26 ಜುಲೈ 2021, 6:17 IST
   

ಬೆಂಗಳೂರು: ನಗರದ ಹೊರವಲಯದ ರೈಲ್ವೆ ಹಳಿ ಮೇಲೆ ವೃದ್ಧೆಯೊಬ್ಬರ ಮುಂಡ ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಸರಕು ಸಾಗಣೆ ಲಾರಿಯಲ್ಲಿ ರುಂಡ ಪತ್ತೆಯಾದ ಪ್ರಕರಣವನ್ನು ಭೇದಿಸಿರುವ ರೈಲ್ವೆ ಪೊಲೀಸರು, ಪ್ರಮುಖ ಆರೋಪಿ ಎಂ.ಬಿ.ಬಾಲಚಂದ್ರ (42) ಎಂಬಾತನನ್ನು ಬಂಧಿಸಿದ್ದಾರೆ.

'ಮಂಡ್ಯ ಜಿಲ್ಲೆಯ ತೂಬಿನಕೆರೆ ಗ್ರಾಮದ ನಿಂಗಮ್ಮ ಕೊಲೆಯಾದ ವೃದ್ಧೆ. ಹಳಿ ಮೇಲೆ‌‌ ಮುಂಡ, ಲಾರಿಯಲ್ಲಿ ರುಂಡ ಹಾಗೂ ವೃದ್ದೆ ನಾಪತ್ತೆಯಾದ ಬಗ್ಗೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಜಂಟಿಯಾಗಿ ಪೊಲೀಸರು ತನಿಖೆ ನಡೆಸಿ ಪ್ರಕರಣ ಭೇದಿಸಿದ್ದಾರೆ' ಎಂದು ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಹೇಳಿದರು.

'ಕೊಲೆ ಆರೋಪದಡಿ ಬಂಧಿಸಿರುವ ಬಾಲಚಂದ್ರ, ತುಮಕೂರಿನವ. ಬೆಂಗಳೂರಿನಲ್ಲಿ ನೆಲೆಸಿ, ಬಿಎಂಟಿಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೃತ ವೃದ್ಧೆಯ ಸೊಸೆ ಜೊತೆ ಸಲುಗೆ ಹೊಂದಿದ್ದ ಬಾಲಚಂದ್ರ ಆಕೆಯ ಜೊತೆ ಸೇರಿ ಕೃತ್ಯ ಎಸಗಿದ್ದ. ಆಕೆ ಸದ್ಯ ತಲೆಮರೆಸಿಕೊಂಡಿದ್ದಾಳೆ' ಎಂದೂ ತಿಳಿಸಿದರು.

ADVERTISEMENT

'ವೃದ್ಧೆ ನಿಂಗಮ್ಮ ಅವರ ಮೊದಲ‌ ಮಗ ತೀರಿಕೊಂಡಿದ್ದು, ಅವರ ಸೊಸೆ ಲತಾ ಬೆಂಗಳೂರಿಗೆ ಬಂದು ವಾಸವಿದ್ದರು. ಪಿಂಚಣಿ ತರಲು ವೃದ್ಧೆ ನಿಂಗಮ್ಮ, ತುಮಕೂರಿನಿಂದ ಬೆಂಗಳೂರಿಗೆ ಇತ್ತೀಚೆಗೆ ಬಂದಿದ್ದರು. ಅದೇ ಸಂದರ್ಭದಲ್ಲೇ ಸೊಸೆ ಜೊತೆ ಜಗಳವಾಗಿತ್ತು. ವೃದ್ಧೆಗೆ ಸೊಸೆ ಹೊಡೆದಿದ್ದರು. ಆಗ ವೃದ್ಧೆ ಮೃತಪಟ್ಟಿದ್ದರು. ನಂತರ, ಮೃತದೇಹವನ್ನು ಆರೋಪಿ ಬಾಲಚಂದ್ರ ರೈಲ್ವೆ ಹಳಿ ಮೇಲೆ ಎಸೆದಿದ್ದ. ನಂತರ, ರೈಲು ಹರಿದು ಬೇರ್ಪಟ್ಟ ರುಂಡವನ್ನು ನೆಲಮಂಗಲ ಬಳಿ ಲಾರಿಯಲ್ಲಿ ಹಾಕಿದ್ದ. ಅದೇ ಲಾರಿ ಇಳಕಲ್‌ಗರ ಹೋಗಿತ್ತು' ಎಂದೂ ಭಾಸ್ಕರ್ ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.