ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಬನಶಂಕರಿ ಸಮೀಪದ ಕದಿರೇನಹಳ್ಳಿ ಕ್ರಾಸ್ನಲ್ಲಿ ಬಿಎಂಟಿಸಿ ಬಸ್ವೊಂದನ್ನು ಅಡ್ಡಗಟ್ಟಿ, ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ನ ಸಿದ್ದ ಅಪ್ಪಾಜಿ (28) ಬಂಧಿತ.
ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಸಿದ್ದ ಅಪ್ಪಾಜಿ ಸೇರಿದಂತೆ ನಾಲ್ವರು ಗುರುವಾರ ಮಧ್ಯಾಹ್ನ ಎರಡು ಬೈಕ್ಗಳಲ್ಲಿ ಕದಿರೇನಹಳ್ಳಿ ಕ್ರಾಸ್ನ ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದರು. ಆ ಮಾರ್ಗವಾಗಿ ಬಿಎಂಟಿಸಿ ಬಸ್ ಚಲಿಸುತ್ತಿತ್ತು. ಬಿಎಂಟಿಸಿ ಚಾಲಕ ಹುಚ್ಚಿರಪ್ಪ ಅವರು ಬೈಕ್ ಸವಾರರಿಗೆ ಬುದ್ಧಿಮಾತು ಹೇಳಿದ್ದರು. ಇದರಿಂದ ಕೆರಳಿದ ಆರೋಪಿಗಳು, ಚಾಲಕನ ಜತೆಗೆ ವಾಗ್ವಾದ ನಡೆಸಿದ್ದರು. ಚಾಲಕನಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಇದು ಬಸ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಗಲಾಟೆ ವಿಕೋಪಕ್ಕೆ ಹೋದ ಮೇಲೆ ನಿರ್ವಾಹಕ ಪ್ರಕಾಶ್ ಅವರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಅದಾದ ಮೇಲೆ ಆರೋಪಿಗಳು ಪರಾರಿ ಆಗಿದ್ದರು.
‘ಆರೋಪಿಗಳ ಬೈಕ್ನ ನೋಂದಣಿ ಸಂಖ್ಯೆ ಆಧರಿಸಿ ಸಿದ್ದ ಅಪ್ಪಾಜಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಇತರೆ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಬನಶಂಕರಿ ಠಾಣೆಯ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.