ಬೆಂಗಳೂರು: ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಚಾಲಕಸದೆಪ್ಪ ಬಾಬಲಿ (45) ಎಂಬಾತ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಸಾರ್ವಜನಿಕರ ವಾಹನಗಳಿಗೆ ಗುದ್ದಿಸಿದ್ದಾರೆ.
ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಮದ್ಯ ಕುಡಿದ ಅಮಲಿನಲ್ಲಿ ಬಸ್ ಚಲಾಯಿಸಿದ ಆರೋಪದಡಿ ಸದೆಪ್ಪ ವಿರುದ್ಧ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಜಪ್ತಿ ಮಾಡಿರುವ ಪೊಲೀಸರು, ಸದೆಪ್ಪನಿಗೆ ನೋಟಿಸ್ ನೀಡಿದ್ದಾರೆ.
‘10 ವರ್ಷಗಳಿಂದ ಚಾಲಕ ನಾಗಿರುವ ಸದೆಪ್ಪ,ಎಂ.ಎಸ್.ಪಾಳ್ಯ ಡಿಪೊದಲ್ಲಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಬೆಳಿಗ್ಗೆ ವಿದ್ಯಾರಣ್ಯಪುರದಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದತ್ತ ಬಸ್ ಚಲಾಯಿಸಿಕೊಂಡು ಹೊರಟಿದ್ದರು. ಬಸ್ಸಿನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಮಾರ್ಗಮಧ್ಯೆ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸಿ, ರಸ್ತೆ ಪಕ್ಕದಲ್ಲಿದ್ದ ವಾಹನಗಳಿಗೆ ಗುದ್ದಿಸಿದ್ದರು. ಕೆಲ ವಾಹನಗಳು ಜಖಂಗೊಂಡವು’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಸಮೀಪದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ರಂಗನಾಥ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಹೋಗಿದ್ದರು. ಸ್ಥಳೀಯರ ಸಹಾಯದಿಂದ ಬಸ್ ನಿಲ್ಲಿಸಿದ್ದರು. ಆಲ್ಕೋಮೀಟರ್ ಮೂಲಕ ಚಾಲಕ ಸದೆಪ್ಪನನ್ನು ಪರೀಕ್ಷಿಸಿದಾಗ, ಅವರ ದೇಹದಲ್ಲಿ 224 ಮಿ.ಗ್ರಾಂ ಮದ್ಯದ ಅಂಶವಿರುವುದು ತಿಳಿಯಿತು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.