ಬೆಂಗಳೂರು: 2020ರ ಜನವರಿ 1ರಿಂದ ಜಾರಿಗೆ ತಂದಿರುವ ವೇತನ ಪರಿಷ್ಕರಣೆ ಬಾಕಿಯನ್ನು 38 ತಿಂಗಳಿಂದಲೂ ಪಾವತಿ ಮಾಡಿಲ್ಲ. ಸುಮಾರು ₹ 1,700 ಕೋಟಿ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ನಾಲ್ಕು ಸಾರಿಗೆ ನಿಗಮಗಳಲ್ಲಿನ ಮೂಲಸೌಕರ್ಯ ಕೊರತೆ, ಪಿ.ಎಫ್. ಇತ್ಯರ್ಥ, ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.
ನಾಲ್ಕು ಸಾರಿಗೆ ನಿಗಮಗಳಲ್ಲಿ 1 ಲಕ್ಷಕ್ಕೂ ಹೆಚ್ಚು ನೌಕರರಿದ್ದಾರೆ. ಸರ್ಕಾರಿ ನೌಕರರಿಗೆ ಮೂಲ ವೇತನವನ್ನು ತುಟ್ಟಿ ಭತ್ಯೆಯೊಂದಿಗೆ ವಿಲೀನಗೊಳಿಸಿ 2024ರಿಂದ ಹೊಸ ವೇತನ ಪರಿಷ್ಕರಣೆ ಮಾಡಿದೆ. ಅದರ ಪ್ರಕಾರ ಸಾರಿಗೆ ನಿಗಮದ ನೌಕರರಿಗೂ ಸರ್ಕಾರಿ ನೌಕರರ ವೇತನದಂತೆ ಮೂಲವೇತನಕ್ಕೆ ತುಟ್ಟಿಭತ್ಯೆ ವಿಲೀನಗೊಳಿಸಿ ನೀಡಬೇಕಿದೆ. ಇದರ ಮೊತ್ತ ಅಂದಾಜು ₹ 10 ಕೋಟಿ ಆಗಬಹುದು ಎಂದು ಹೇಳಿದ್ದಾರೆ.
ಬಿಎಂಟಿಸಿಯಲ್ಲೇ ಸುಮಾರು 1,631 ವಿದ್ಯುತ್ ಚಾಲಿತ ಬಸ್ಗಳಿದ್ದು, ಈ ಬಸ್ಗಳ ಕಂಪನಿಗಳಿಗೆ ಮೂರು ತಿಂಗಳಿನಿಂದ ₹200 ಕೋಟಿ ಬಿಲ್ ಪಾವತಿ ಮಾಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನೌಕರರ ಗ್ರಾಚ್ಯುಟಿ, ರಜೆ ನಗದೀಕರಣ ಬಾಕಿ ₹ 315 ಕೋಟಿ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.