ಬಿಎಂಟಿಸಿ ವೇಗದೂತ ಬಸ್ ಸಂಚಾರಕ್ಕೆ, ಘಾಟಿ–ಈಶಾ ಫೌಂಡೇಷನ್ ಪ್ಯಾಕೇಜ್ ಪ್ರವಾಸ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಚಾಲನೆ ನೀಡಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಬಿಎಂಟಿಸಿ ವೇಗದೂತ ಬಸ್ ಸಂಚಾರಕ್ಕೆ, ಘಾಟಿ–ಈಶಾ ಫೌಂಡೇಷನ್ ಪ್ಯಾಕೇಜ್ ಪ್ರವಾಸ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಚಾಲನೆ ನೀಡಿದರು. ಅಪಘಾತದಲ್ಲಿ ಮೃತಪಟ್ಟ ಬಿಎಂಟಿಸಿ ನೌಕರರ ಕುಟುಂಬಕ್ಕೆ ನಿಗಮದಿಂದ ತಲಾ ₹ 50 ಲಕ್ಷ ಮತ್ತು ವಿಮಾ ಮೊತ್ತ, ಅನಾರೋಗ್ಯದಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ತಲಾ ₹ 10 ಲಕ್ಷ ವಿತರಿಸಲಾಯಿತು
ಕೆಂಪೇಗೌಡ ಬಸ್ ನಿಲ್ದಾಣದಿಂದ ಅತ್ತಿಬೆಲೆ, ಬನಶಂಕರಿ ಟಿಟಿಎಂಸಿಯಿಂದ ಅತ್ತಿಬೆಲೆ, ಕೆಂಪೇಗೌಡ ಬಸ್ ನಿಲ್ದಾಣದಿಂದ ದೇವನಹಳ್ಳಿ, ಬನಶಂಕರಿ ಟಿಟಿಎಂಸಿಯಿಂದ ಹಾರೋಹಳ್ಳಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ನೆಲಮಂಗಲಕ್ಕೆ ಸೀಮಿತ ನಿಲುಗಡೆಯ ವೇಗದೂತ ಬಸ್ಗಳು ಸಂಚರಿಸಲಿವೆ ಎಂದು ಸಚಿವರು ತಿಳಿಸಿದರು.
ವೇಗದೂತ ಸಾಮಾನ್ಯ ಸೇವೆಗಳ ಮಾಸಿಕ ಪಾಸುಗಳನ್ನು ಟುಮ್ಯಾಕ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಮಾದರಿಯಲ್ಲಿ ವಿತರಣೆ ಮಾಡಲು ಕ್ರಮ ಕೈಗೊಂಡಿದ್ದು, ಪ್ರಯಾಣಿಕರು ಆ್ಯಪ್ ಮೂಲಕ ಪಾಸು ಪಡೆಯಬಹುದು ಎಂದರು.
ಬೆಂಗಳೂರು-ಈಶಾ ಫೌಂಡೇಷನ್ ವಿಶೇಷ ಪ್ರವಾಸವು ಈಗಾಗಲೇ ಜನಪ್ರಿಯಗೊಂಡಿದೆ. ಪ್ರಯಾಣಿಕರ ಒತ್ತಾಸೆಯಂತೆ ಹೆಚ್ಚುವರಿಯಾಗಿ ‘ಘಾಟಿ ಈಶಾ ಫೌಂಡೇಷನ್’ ಪ್ರವಾಸ ಪ್ಯಾಕೇಜ್ ರೂಪಿಸಲಾಗಿದೆ. ಜೂನ್ 21ರಂದು ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಬೈಕ್ ಅಪಘಾತಗಳಲ್ಲಿ ಮೃತಪಟ್ಟ ಬಿಎಂಟಿಸಿಯ ಶ್ರೀನಿವಾಸ್, ಶಶಿಧರ್, ಅವರ ಕುಟುಂಬದ ಸದಸ್ಯರಿಗೆ ಕೆನರಾ ಬ್ಯಾಂಕ್ ವಿಮೆ ತಲಾ ₹1 ಕೋಟಿ, ಸಂಸ್ಥೆಯ ವತಿಯಿಂದ ₹ 50 ಲಕ್ಷ, ವಿ. ಬಾಲಕೃಷ್ಣ ಅವರಿಗೆ ವಿಮೆ ₹ 50 ಲಕ್ಷ, ಸಂಸ್ಥೆಯಿಂದ ₹ 50 ಲಕ್ಷ ವಿತರಿಸಲಾಯಿತು. ಆರೋಗ್ಯ ಸಮಸ್ಯೆಯಿಂದ ಮೃತಪಟ್ಟ 9 ನೌಕರರ ಕುಟುಂಬಕ್ಕೆ ಗುಂಪು ವಿಮಾ ಯೋಜನೆಯಡಿ ₹ ತಲಾ 10 ಲಕ್ಷದ ಚೆಕ್ ವಿತರಿಸಲಾಯಿತು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್., ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕರಾದ ಅಬ್ದುಲ್ ಅಹದ್, ಶಿಲ್ಪಾ ಎಂ, ಕೆನರಾ ಬ್ಯಾಂಕ್ ಉಪಮಹಾ ಪ್ರಬಂಧಕಿ ಕೆ.ಕಾಳಿ ಉಪಸ್ಥಿತರಿದ್ದರು.
Highlights -
Cut-off box - ಪ್ರಶಂಸನಾ ಪತ್ರ ಬಿಎಂಟಿಸಿಯಲ್ಲಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿದ ವಿವಿಧ ಘಟಕಗಳ ವ್ಯವಸ್ಥಾಪಕರಾದ ಸರಸ್ವತಿ ಆರ್ ಮಧುಸೂಧನ್ ರೆಡ್ಡಿ ಜಿ.ಆರ್ ಮೊಹಮ್ಮದ್ ಅಕ್ಮಲ್ ಪಾಷ ರಮೇಶ್ ಬಿ.ವೈ ರವಿ ಚೌವ್ಹಾಣ ಭೀಮಕುಮಾರ್ ಎಚ್ ಪ್ರಸನ್ನ ಡಿ.ಜಿ ಮಲ್ಲಿಕಾರ್ಜುನಯ್ಯ ಪಿ.ಬಿ ಅಣ್ಣಪ್ಪಯ್ಯ ಆಚಾರಿ ಬಡ್ಡು ನಾಯಕ್ ಕಾಂತರಾಜು ಇ ನಾಗೇಶ್ ಶ್ರೀನಿವಾಸ ಮೂರ್ತಿ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.