ಬೆಂಗಳೂರು: ಇದೇ 18ರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತನ್ನ ಸಿಬ್ಬಂದಿಗೆ ಆದೇಶ ನೀಡಿದೆ.
‘ಲಾಕ್ಡೌನ್ ಅವಧಿಯು ಇದೇ 17ರಂದು ಪೂರ್ಣಗೊಳ್ಳಲಿದೆ. ಸಾರಿಗೆ ಇಲಾಖೆಯನ್ನು ಅಗತ್ಯ ಸೇವೆ ಸಲ್ಲಿಸುವ ಇಲಾಖೆ ಎಂದು ಪರಿಗಣಿಸಲಾಗಿರುವುದರಿಂದ ಅಧಿಕಾರಿಗಳನ್ನೊಳಗೊಂಡಂತೆ ಸಂಸ್ಥೆಯ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಅದು ತಿಳಿಸಿದೆ.
‘ಲಾಕ್ಡೌನ್ ಅವಧಿ ಮುಗಿಯುವುದರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಸಿಬ್ಬಂದಿಗೆ ಆದೇಶ ನೀಡಿದ್ದೇವೆ. ಆದರೆ, ಬಸ್ ಸೇವೆ ಆರಂಭಿಸುವಂತೆ ಸರ್ಕಾರದಿಂದ ಈವರೆಗೆ ಯಾವುದೇ ನಿರ್ದೇಶನ ಬಂದಿಲ್ಲ. ಸೂಚನೆ ಬರುತ್ತಿದ್ದಂತೆ ಸೇವೆ ಪ್ರಾರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಲಾಕ್ಡೌನ್ ನಂತರ ಯಾವ ರೀತಿ ಕಾರ್ಯನಿರ್ವಹಿಸಬೇಕು, ಸಿದ್ಧತೆ ಹೇಗಿರಬೇಕು ಎಂಬ ಕುರಿತು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ತಪಾಸಣೆ ಮಾಡಿಸಿಕೊಂಡ ನಂತರವೇ ಕರ್ತವ್ಯಕ್ಕೆ ಹಾಜರಾಗಬೇಕು. ಅದರಲ್ಲಿಯೂ, ಬೇರೆ ನಗರ ಅಥವಾ ಜಿಲ್ಲೆಯಿಂದ ಬರುವ ಸಿಬ್ಬಂದಿ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು’ ಎಂದು ಅವರು ಹೇಳಿದರು.
ಬಿಎಂಟಿಸಿ ಸಿದ್ಧತೆ ಹೇಗಿದೆ?
- ಎಲ್ಲ ಡಿಪೊಗಳಿಗೆ ಥರ್ಮಲ್ ಸ್ಕ್ಯಾನರ್ ಒದಗಿಸಲಾಗಿದ್ದು, ನಿತ್ಯ ಚಾಲಕ–ನಿರ್ವಾಹಕರ ಪರೀಕ್ಷೆ
- ಎಲ್ಲ ಸಿಬ್ಬಂದಿಗೆ ಮುಖ–ಕೈಗವಸು, ಸ್ಯಾನಿಟೈಸರ್ ವಿತರಣೆ
- ಬಸ್ಗಳಲ್ಲಿ ಕೊರೊನಾ ವಿರುದ್ಧದ ಜಾಗೃತಿ ಸಂದೇಶ ಪ್ರದರ್ಶನ
- ಎಲ್ಲ ಬಸ್ಗಳನ್ನು ನಿತ್ಯ ಸೋಂಕು ಮುಕ್ತಗೊಳಿಸಲಾಗುವುದು
- ನಗದು ವ್ಯವಹಾರ ಆದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಸಿದ್ಧತೆ
- ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಶುಲ್ಕ ಸಂಗ್ರಹಕ್ಕೆ ಚಿಂತನೆ
- ಮಾಸಿಕ ಅಥವಾ ವಾರದ ಪಾಸ್ಗಳನ್ನು ಬಳಸಲು ಉತ್ತೇಜನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.