ADVERTISEMENT

ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 19:02 IST
Last Updated 8 ಡಿಸೆಂಬರ್ 2019, 19:02 IST
ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದ ವ್ಯಾಪಾರಿಗಳನ್ನು ಶಾಸಕ ಎಂ.ಕೃಷ್ಣಪ್ಪ ತರಾಟೆಗೆ ತೆಗೆದುಕೊಂಡರು. ಜಂಟಿ ಆಯುಕ್ತ ಎಂ.ರಾಮಕೃಷ್ಣ, ಕಾರ್ಯನಿರ್ವಾಹಕ ಎಂಜಿನಿಯರ್ ಶಶಿಕುಮಾರ್ ಇದ್ದಾರೆ.
ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದ ವ್ಯಾಪಾರಿಗಳನ್ನು ಶಾಸಕ ಎಂ.ಕೃಷ್ಣಪ್ಪ ತರಾಟೆಗೆ ತೆಗೆದುಕೊಂಡರು. ಜಂಟಿ ಆಯುಕ್ತ ಎಂ.ರಾಮಕೃಷ್ಣ, ಕಾರ್ಯನಿರ್ವಾಹಕ ಎಂಜಿನಿಯರ್ ಶಶಿಕುಮಾರ್ ಇದ್ದಾರೆ.   

ಬೊಮ್ಮನಹಳ್ಳಿ: ಬಿಬಿಎಂಪಿಯ ಸಮಗ್ರ ಸ್ವಚ್ಛತಾ ಆಂದೋಲನದ ಅಂಗವಾಗಿ ವಸಂತಪುರ ವಾರ್ಡ್‌ನಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಶಾಸಕ ಎಂ.ಕೃಷ್ಣಪ್ಪ, ಪಾದಚಾರಿ ಮಾರ್ಗ ಅತಿಕ್ರಮಣ ಆಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ತಳ್ಳುವ ಗಾಡಿಗಳಲ್ಲಿ ವ್ಯಾಪಾರ ನಡೆಸುತ್ತಿದ್ದವರು ಪಾದಚಾರಿ ಮಾರ್ಗದ ಒತ್ತುವರಿ ಮಾಡಿರುವುದನ್ನು ನೋಡಿ, ಸೌಜನ್ಯದಿಂದಲೇ ‘ಬೇರೆಡೆ ವ್ಯಾಪಾರ ಮಾಡಿಕೊಳ್ಳಿ’ ಎಂದು ಸೂಚಿಸಿದರು. ಅಂಗಡಿ ಮಾಲೀಕರು ಫುಟ್‌ಪಾತ್‌ ಒತ್ತುವರಿ ಮಾಡಿಕೊಂಡಿದ್ದನ್ನು ಕಂಡು ಸಿಟ್ಟಾದರು. ತಕ್ಷಣವೇ ಒತ್ತುವರಿ ತೆರವು ಗೊಳಿಸುವಂತೆ ಸೂಚಿಸಿದರು. ಪಾದ ಚಾರಿ ಮಾರ್ಗದಲ್ಲಿದ್ದ ಸಾಮಗ್ರಿಗಳನ್ನು ಬಿಬಿಎಂಪಿ ಸಿಬ್ಬಂದಿ ಜಪ್ತಿ ಮಾಡಿದರು.

ಕುಸಿದ ಸ್ಲ್ಯಾಬ್: ಮುಖ್ಯರಸ್ತೆಯ ಇಕ್ಕೆಲ ಗಳ ಒಳಚರಂಡಿ ಸ್ಲ್ಯಾಬ್‌ಗಳು ಕುಸಿದಿರುವುದನ್ನು ನೋಡಿದ ಶಾಸಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ‘ನಿಮ್ಮ ಮಕ್ಕಳು ರಸ್ತೆಯಲ್ಲಿ ಓಡಾಡುವಾಗ, ಚರಂಡಿಯಲ್ಲಿ ಬಿದ್ದರೆ ಏನು ಮಾಡುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಅಡ್ಡರಸ್ತೆಯೊಂದರಲ್ಲಿ ಚರಂಡಿ ನಿರ್ಮಾಣಕ್ಕೂ ಮುನ್ನವೇ ರಸ್ತೆಗೆ ಕಾಂಕ್ರಿಟ್ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ, ‘ಕಾಮಗಾರಿಯ ಬಿಲ್ ತಡೆಹಿಡಿಯಿರಿ’ ಎಂದು ವಲಯದ ಜಂಟಿ ಆಯುಕ್ತ ಎಂ.ರಾಮಕೃಷ್ಣ ಅವರಿಗೆ ಸೂಚಿಸಿದರು.

ADVERTISEMENT

ಕನಕಪುರ ರಸ್ತೆಗೆ ಹೊಂದಿ ಕೊಂಡಿರುವ ವಸಂತಪುರ ಮುಖ್ಯರಸ್ತೆ ಯಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಕಾರ್ಮಿಕರ ಜತೆ ಪಾಲಿಕೆ ಅಧಿಕಾರಿಗಳೂ ಕೈಜೋಡಿಸಿದರು.

‘230 ಪೌರಕಾರ್ಮಿಕರು 12 ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಕನಕಪುರ ಮುಖ್ಯರಸ್ತೆ ಹಾಗೂ ವಸಂತ ಪುರ ಮುಖ್ಯರಸ್ತೆಯ ವಿವಿಧ ಬಡಾವಣೆಗಳಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಿದ್ದೇವೆ. ಈ ಪರಿಸರದಲ್ಲಿದ್ದ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ’ ಎಂದು ಆರೋಗ್ಯ ನಿರೀಕ್ಷಕ ಮಹೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.