ಬೆಂಗಳೂರು: ‘ಇಂತಹ ಜಾತಿಯಲ್ಲೇ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕಿರುವುದಿಲ್ಲ. ಜಾತಿ ಮೀರಿದ ಮನುಷ್ಯತ್ವದ ತತ್ವ ಸಾರಿದ ನಾರಾಯಣ ಗುರುಗಳ ಸಿದ್ಧಾಂತದಂತೆ ನಾವು ನಡೆಯಬೇಕು’ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಬಿಲ್ಲವ ಅಸೋಸಿಯೇಷನ್ ಬನ್ನೇರುಘಟ್ಟ ರಸ್ತೆಯ ಹುಳಿಮಾವುವಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 14ನೇ ವರ್ಷದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
‘ಮನುಷ್ಯತ್ವಕ್ಕೆ ನಟ ರಾಜಕುಮಾರ್ ಬಹುದೊಡ್ಡ ಮಾದರಿ. ಯಾವುದೇ ಕಾರ್ಯಕ್ರಮ ಎಲ್ಲ ಜಾತಿಯ, ಧರ್ಮದ ಬಡವರನ್ನು ತಲುಪುವಂತಾಗಬೇಕೆಂದು ಹೇಳುತ್ತಿದ್ದ ಅವರು ಅದರಂತೆ ನಡೆಯುತ್ತಿದ್ದರು’ ಎಂದರು.
‘ಬಿಲ್ಲವ ಸಂಘದ ಕೋರಿಕೆಯಂತೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ. ಆದಷ್ಟು ಬೇಗನೆ ಕಾರ್ಯ ರೂಪಕ್ಕೆ ತರಲು ಶ್ರಮಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.
ಆದರ್ಶ ದಂಪತಿಗಳಿಗೆ ಪ್ರಶಸ್ತಿ ವಿತರಿಸಿದ ನಟಿ ತಾರಾ ಅನೂರಾಧ ‘ಪತಿ-ಪತ್ನಿ ನಡುವೆ ವಿಭಿನ್ನ ಅಭಿರುಚಿ ಇದ್ದಲ್ಲಿ ಮಾತ್ರವೇ ಆದರ್ಶ ದಂಪತಿ ಆಗಲು ಸಾಧ್ಯ’ ಎಂದರು.
ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ ಕಾರ್ಯಕ್ರಮ ಉದ್ಘಾಟಿಸಿದರು. ರಾಣಿ ಅಬ್ಬಕ್ಕದೇವಿ ಪ್ರಶಸ್ತಿ ಪುರಸ್ಕೃತರಾದ ವನಜಾ ಪೂಜಾರ್ತಿ, ಊರ್ಮಿಳಾ ರಮೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಟಿ ರಶ್ಮಿ, ಬಿಲ್ಲವ ಅಸೋಷಿಯೇಷನ್ ಮಹಿಳಾ ಘಟಕದ ಅಧ್ಯಕ್ಷೆ ಜಲಜಾ ಶೇಖರ್, ಅಧ್ಯಕ್ಷ ವೇದಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.