ಬೆಂಗಳೂರು: ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿಸಿ, ಮಹತ್ವದ ಕೊಡುಗೆ ನೀಡಿದ ಸಾಹಿತಿಗಳಿಗೆ ಗೌರವ ಸಲ್ಲಿಸಲು ಬುಕ್ ಬ್ರಹ್ಮ ಸಂಸ್ಥೆಯು ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ ಸ್ಥಾಪಿಸಿದೆ.
ಸಂಸ್ಥೆಯು ಪ್ರತಿ ವರ್ಷ ನೀಡಲು ನಿರ್ಧರಿಸಿರುವ ಈ ಪುರಸ್ಕಾರವು ₹ 2 ಲಕ್ಷ ನಗದು, ಫಲಕ ಹಾಗೂ ಪುಸ್ತಕದ ಉಡುಗೊರೆ ಒಳಗೊಂಡಿದೆ. ಪ್ರತಿ ವರ್ಷ ಒಂದೊಂದು ಭಾರತೀಯ ಭಾಷೆಯ ಸಾಹಿತಿಗಳಿಗೆ ಈ ಪುರಸ್ಕಾರವನ್ನು ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದಲ್ಲಿ ನೀಡಲಾಗುತ್ತದೆ. ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿದಂತೆ ಆಯಾ ಭಾಷೆಯ ಸಾಹಿತಿಗಳನ್ನು ಒಳಗೊಂಡ ಆಯ್ಕೆ ಸಮಿತಿ ರಚಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಇದೇ 9 ರಿಂದ 11ರವರೆಗೆ ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ ನಡೆಯಲಿದೆ. ಇದೇ ಉತ್ಸವದಲ್ಲಿ ಈ ವರ್ಷದ ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ ಪಡೆಯುವ ಸಾಹಿತಿಯ ಹೆಸರನ್ನು ಘೋಷಣೆ ಮಾಡಿ, ಪುರಸ್ಕರಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಮೂರು ದಿನದ ಉತ್ಸವದಲ್ಲಿ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ ಉತ್ಸವದಲ್ಲಿ ‘ಬುಕ್ ಬ್ರಹ್ಮ ಕಾದಂಬರಿ ಪುರಸ್ಕಾರ’ವನ್ನು ತಮಿಳಿನ ಸಾಹಿತಿ ಪೆರುಮಾಳ್ ಮುರುಗನ್, ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ’ ವಿಜೇತರಿಗೆ ಮಲಯಾಳಂ ಲೇಖಕ ಬೆನ್ಯಮಿನ್ ಅವರು ಬಹುಮಾನಗಳನ್ನು ವಿತರಿಸುತ್ತಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.