ಬೆಂಗಳೂರು: ‘ಲೇಖಕನಾದವನು ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಅವನ ಬರಹ ಜೊಳ್ಳು’ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದರು.
ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೃಷ್ಣಕವಿ ಅವರ ‘ಸ್ವಾತಿ ಮುತ್ತುಗಳು’ ಮುಕ್ತಕ ಸಂಕಲನ ಬಿಡುಗಡೆ ಮಾಡಿ, ಮಾತನಾಡಿದರು.
‘ಬದುಕಿನ ಎಲ್ಲ ಕ್ಷೇತ್ರದಲ್ಲಿರುವ ವಿಷಯಗಳನ್ನು ಮುಕ್ತಕಗಳಿಗೆ ವಸ್ತುವಾಗಿಸಿಕೊಳ್ಳಬಹುದು. ಅವು ಪ್ರತಿಕ್ರಿಯಾತ್ಮಕ ಹಾಗೂ ಪ್ರತಿಮಾತ್ಮಕವಾಗಿ ಇರುತ್ತವೆ. ಪ್ರತಿಕ್ರಿಯಾರೂಪದ ಮುಕ್ತಕಗಳು ಕ್ಷಣಿಕವಾಗಿರುತ್ತವೆ. ಪ್ರತಿಮಾತ್ಮಕ ರೂಪದವು ಶಾಶ್ವತವಾಗಿ ಉಳಿಯುತ್ತವೆ. ಮುಕ್ತಕ ಬರೆಯುವವರೆಲ್ಲರೂ ವೈಜ್ಞಾನಿಕ ಮನೋಧರ್ಮ, ವೈಚಾರಿಕ ದೃಷ್ಟಿಕೋನ ಹೊಂದಿರುತ್ತಾರೆ ಎನ್ನಲು ಸಾಧ್ಯವಿಲ್ಲ. ತತ್ವ–ಸಿದ್ಧಾಂತ ಹೇಳುವಾಗ ಕರ್ಮ ಸಿದ್ಧಾಂತವನ್ನೂ ಕೆಲವರು ಹೇಳುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ‘ಮಂಕುತಿಮ್ಮನ ಕಗ್ಗ’ ಎಂದು ಹೇಳಿದರು.
‘ಈ ಕೃತಿಯಲ್ಲಿನ ಎಷ್ಟೋ ಕವನಗಳು ಪ್ರಸ್ತುತ ಬದುಕಿಗೆ ಕನ್ನಡಿ ಹಿಡಿಯುವಂತಿವೆ. ಕೋವಿಡ್, ಶೈಕ್ಷಣಿಕ ವ್ಯವಸ್ಥೆ ಬಗ್ಗೆಯೂ ಹೇಳಲಾಗಿದೆ. ಮಾನವ ಸಿದ್ಧಾಂತಗಳನ್ನು ಪ್ರತಿಪಾದಿಸುವ ಅನೇಕ ಮುಕ್ತಕಗಳಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಕ್ತಕಗಳ ರಚನೆಕಾರಕೃಷ್ಣಕವಿ, ‘ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ ಓದಿದ ಬಳಿಕ ಮುಕ್ತಕಗಳನ್ನು ಬರೆಯುವ ಆಸೆ ಗರಿಗೆದರಿತ್ತು. ಆದರೆ, ಆ ಆಸೆ ಇತ್ತೀಚೆಗೆ ಪೂರ್ಣಗೊಂಡಿತು. ನನ್ನ ಮುಕ್ತಕಗಳನ್ನು ಓದಿದವರೆಲ್ಲಾ ಬಹಳವಾಗಿ ಮೆಚ್ಚಿ, ಅವುಗಳನ್ನು ಕೃತಿಯ ರೂಪದಲ್ಲಿ ತರುವಂತೆ ಪ್ರೋತ್ಸಾಹಿಸಿದರು. ಅವರ ಮೆಚ್ಚುಗೆ ಮತ್ತು ಪ್ರೀತಿಯೇ ಈ ಕೃತಿ ಹೊರಬರಲು ಕಾರಣ’ ಎಂದು ಹೇಳಿದರು.
ಬಳಿಕಆರ್ಯವೈಶ್ಯ ಸಮಾಜದ ಲೇಖಕರು, ಗಾಯಕರು ಹಾಗೂ ಸಾಹಿತ್ಯಾಸಕ್ತರಿಂದ ‘ಅಕ್ಷರ ಮಿಲನ’ ಕಾರ್ಯಕ್ರಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.