ಬೆಂಗಳೂರು: ‘ಭಾರತೀಯ ಸಮಾಜವು ‘ಹನುಮಾನ್ ಸಿಂಡ್ರೋಮ್ ಕಾಯಿಲೆ’ಯಿಂದ ಬಳಲುತ್ತಿದೆ. ಆದ್ದರಿಂದ ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ವೈದ್ಯ ಸಾಹಿತಿಡಾ.ನಾ. ಸೋಮೇಶ್ವರ ತಿಳಿಸಿದರು.
ಸಮನ್ವಿತ ಪ್ರಕಾಶನ ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿಸದ್ಯೋಜಾತ ಅವರ ‘ಮಾಗಧೇಯ’ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು. ‘ಹನುಮಂತನಿಗೆ ಎಲ್ಲ ರೀತಿಯ ಶಕ್ತಿಗಳಿದ್ದರೂ ಶಾಪದಿಂದಾಗಿ ಎಲ್ಲವನ್ನೂ ಮರೆತಿದ್ದ.ಒಬ್ಬ ಜಾಂಬವಂತ ಬಂದು ಹನುಮಂತನಿಗೆ ಶಕ್ತಿಯ ಪರಿಚಯ ಮಾಡಿಸಬೇಕಾಯಿತು. ಅದೇ ರೀತಿ, ಭಾರತೀಯರು ನಮ್ಮದನ್ನು ಮರೆತಿದ್ದಾರೆ.ಥಾಮಸ್ ಮೆಕಾಲೆ ತನ್ನ ಶಿಕ್ಷಣ ಪದ್ಧತಿಯ ಮೂಲಕ ಇಲ್ಲಿನ ಗುರುಕುಲ ಶಿಕ್ಷಣ ಪದ್ಧತಿಯನ್ನು ನಾಶ ಮಾಡಿದ. ನಂತರ ಬ್ರಿಟಿಷರು ಇಲ್ಲಿನ ಪರಂಪರೆ ಮತ್ತು ಸಂಸ್ಕೃತಿಯನ್ನು ನಾಶ ಮಾಡುವ ಸಲುವಾಗಿ ಇತಿಹಾಸ ತಿರುಚಿದರು’ ಎಂದು ಬೇಸರ ವ್ಯಕ್ತಪಡಿಸಿದರು.
‘ಬಹುಮುಖಿಆಕರಗಳನ್ನು ಆಧರಿಸಿ, ನೈಜ ಇತಿಹಾಸವನ್ನು ಮರುನಿರೂಪಿಸುವ ಮಹತ್ವದ ಕಾರ್ಯ ಆಗಬೇಕು. ದೇಶದ 120 ರಾಜವಂಶಗಳ ಸಮಗ್ರ ಮಾಹಿತಿಯನ್ನು ಒಂದೆಡೆ ದಾಖಲಿಸಬೇಕು’ ಎಂದರು.
ರಂಗಕರ್ಮಿ ಎಸ್.ಎನ್. ಸೇತುರಾಂ,‘ಸದ್ಯೋಜಾತ ಅವರ ಕೃತಿಗಳು ಕನ್ನಡದ ಓದುಗರಿಗೆ ತಮ್ಮತನ ನೆನಪಿಸುವ ಕೆಲಸದಲ್ಲಿ ತೊಡಗಿವೆ. ಇಂತಹ ಇತಿಹಾಸದ ಪುಸ್ತಕಗಳನ್ನು ಸರ್ಕಾರಗಳು ಮುನ್ನಡೆಸಬೇಕು. ಅಧ್ಯಯನಶೀಲ ವ್ಯಕ್ತಿಗಳು ಸಕ್ರಿಯ ರಾಜಕಾರಣದಲ್ಲಿ ಇದ್ದರೆ, ಸಮಾಜ ಹೆಚ್ಚು ಆರೋಗ್ಯವಂತವಾಗಿರುತ್ತದೆ’ ಎಂದು ಹೇಳಿದರು.
ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ವಿಭಾಗದ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಪ.ರಾ. ಕೃಷ್ಣಮೂರ್ತಿ,ರಸಧ್ವನಿ ಕಲಾಕೇಂದ್ರದ ಶ್ರೀಕಾಂತ್, ಹಾಗೂ ಸಮನ್ವಿತದ ರಾಧಾಕೃಷ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.