ಬೆಂಗಳೂರು: 'ಅರಣ್ಯ ನಾಶಕ್ಕೆ ಅಲ್ಲಿ ವಾಸಿಸುವ ಬುಡಕಟ್ಟು ಸಮುದಾಯದವರು ಕಾರಣರಲ್ಲ. ಅದಕ್ಕೆ ಕಾರಣ ನಾಡಿನ ಜನರು' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚಾರುಮತಿ ಪ್ರಕಾಶನವು ಆಯೋಜಿಸಿದ್ದ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರ ‘ಆನೆ ಕಾಡು’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
'ಸಾಕಾನೆಯ ಕಾಡಿನ ಜೀವನದ ಜೊತೆಗೆ ಕಾಡಿನ ನಿಸರ್ಗ ಮತ್ತು ಅಲ್ಲಿ ವಾಸಿಸುವ ಜನಜೀನವದ ಸಮಸ್ಯೆಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ. ಮಲೆನಾಡು, ಪಶ್ಚಿಮ ಘಟ್ಟಗಳು, ಕರಾವಳಿ ಭಾಗಗಳಿಗೆ ಸಂಚರಿಸಿ ಲೇಖಕರು ಕಾದಂಬರಿ ರಚಿಸಿದ್ದಾರೆ' ಎಂದರು.
ಲೇಖಕಿ ಎಂ.ಎಸ್.ಆಶಾದೇವಿ, 'ಕಾಡು ಪ್ರಾಣಿಗಳ ಮತ್ತು ಅಲ್ಲಿ ವಾಸಿಸುವ ಬುಡಕಟ್ಟು ಜನರ ನಾಶ ಹೇಗೆ ಆಗುತ್ತದೆ? ನಾಡಿನಿಂದ ಕಾಡಿಗೆ ಆಗುತ್ತಿರುವ ಕ್ರೂರತೆಯ ಸನ್ನಿವೇಶಗಳು. ಬುಡಕಟ್ಟು ಜನರಿಗೆ ಬೇಕಾದ ಮೂಲ ಸೌಕರ್ಯಗಳ ಕುರಿತು, ಅವರಿಗೆ ಆಗುತ್ತಿರುವ ಶೋಷಣೆಗಳ ಬಗ್ಗೆ ಲೇಖಕರು ವಿವರಿಸಿದ್ದಾರೆ' ಎಂದು ಹೇಳಿದರು.
ಪತ್ರಕರ್ತ ನಾಗೇಶ್ ಹೆಗಡೆ, ‘ಅರಣ್ಯ ಇಲಾಖೆಯ ವೆಬ್ಸೈಟ್ನಲ್ಲಿ ಅದರ ಅಭಿವೃದ್ಧಿಗೆ ಸಂಬಂಧಪಟ್ಟ ಮಾಹಿತಿಯನ್ನು ಪ್ರಕಟಿಸಿಲ್ಲ. ಅದರ ಬದಲಿಗೆ ಮರ ಕಡಿಯಲು ಅನುಮತಿ, ಚಿತ್ರೀಕರಣಕ್ಕೆ ಅನುಮತಿ...ಕಾಡಿನ ನಾಶಕ್ಕೆ ಬೇಕಾದ ಮಾಹಿತಿಯನ್ನೇ ನಮೂದಿಸಿದ್ದಾರೆ' ಎಂದು ಹೇಳಿದರು.
‘ಇಲಾಖೆಯ ಅಧಿಕಾರಿಗಳು ಮರಗಳ ಕಡಿಯಲು ತರಬೇತಿ ಪಡೆಯುತ್ತಿದ್ದಾರೆ. ಇದನ್ನು ನೋಡಿದರೆ ಅರಣ್ಯ ಪಾಲನೆಯಲ್ಲಿ ಅವರಿಗೆ ಆಸಕ್ತಿಯೇ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.