ADVERTISEMENT

ಇತಿಹಾಸದ ಮರು ದರ್ಶನ ಅಗತ್ಯ: ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 18:30 IST
Last Updated 25 ಡಿಸೆಂಬರ್ 2022, 18:30 IST
ಪುಸ್ತಕಗಳನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆ ಮಾಡಿದರು. ಚಾಣಕ್ಯ ವಿಶ್ವವಿದ್ಯಾಲಯದ ಸಂಶೋಧಕ ಪ್ರೊ.ಮತಿಘಟ್ಟ ಎಸ್.ಚೈತ್ರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ.ಚಿ ರಮೇಶ, ಡಿ.ವಿ.ಸದಾನಂದಗೌಡ, ತೇಜಸ್ವಿ ಸೂರ್ಯ, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಸಮ-ಕುಲಪತಿ ಎಸ್. ಚಂದ್ರಶೇಖರ್ ಇದ್ದರು - ಪ್ರಜಾವಾಣಿ ಚಿತ್ರ
ಪುಸ್ತಕಗಳನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆ ಮಾಡಿದರು. ಚಾಣಕ್ಯ ವಿಶ್ವವಿದ್ಯಾಲಯದ ಸಂಶೋಧಕ ಪ್ರೊ.ಮತಿಘಟ್ಟ ಎಸ್.ಚೈತ್ರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ.ಚಿ ರಮೇಶ, ಡಿ.ವಿ.ಸದಾನಂದಗೌಡ, ತೇಜಸ್ವಿ ಸೂರ್ಯ, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಸಮ-ಕುಲಪತಿ ಎಸ್. ಚಂದ್ರಶೇಖರ್ ಇದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಹಳಷ್ಟು ಸಂದರ್ಭಗಳಲ್ಲಿ ರಾಜಕೀಯ ಕರಪತ್ರಗಳ ರೀತಿಯಲ್ಲಿ ಇತಿಹಾಸ ರಚನೆಯಾಗಿದೆ. ಆದ್ದರಿಂದ ಇತಿಹಾಸದ ದರ್ಶನ ಮತ್ತು ಮರು ದರ್ಶನದ ಅಗತ್ಯವಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

‘ಇತಿಹಾಸ ದರ್ಪಣ’ ಆಯೋಜಿಸಿದ್ದ ವಿಜಯ್ ಪೂಣಚ್ಚ ತಂಬಂಡ ಅವರ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಮಾಯಣ, ಮಹಾಭಾರತಗಳು ನಮ್ಮ ಇತಿಹಾಸ ಎಂದು ನಂಬಿದ್ದೇವೆ. ಆದರೆ, ನಿಜವಾಗಿಯೂ ರಾಮ ಇದ್ದನೇ, ರಾಮ ಅಲ್ಲಿ ಬಾಣ ಬಿಟ್ಟನೇ ಎಂಬ ರೀತಿಯ ಐತಿಹಾಸಿಕತೆಯ ಗೋಜಿಗೆ ನಾವು ಹೋಗಲಿಲ್ಲ’ ಎಂದರು.

‘ಪಾಶ್ಚಿಮಾತ್ಯರ ಪ್ರಭಾವದಿಂದ ಇತಿಹಾಸ ರಚನೆ ಮಾಡುವ ಕ್ರಮಗಳನ್ನು ಭಾರತದಲ್ಲೂ ಬೆಳಸಿಕೊಳ್ಳಲಾಯಿತು. ಇವು ಅನೇಕ ಸಂದರ್ಭಗಳಲ್ಲಿ ಇತಿಹಾಸಕ್ಕೆ ಹತ್ತಿರುವ ಆಗಿರುವುದಕ್ಕಿಂತ ರಾಜಕೀಯ ಪ್ರೇರಿತವೇ ಆಗಿರುತ್ತವೆ’ ಎಂದರು.

ADVERTISEMENT

‘ಇಂದಿನ ಆರ್ಥಿಕ ನೀತಿ ನಿರೂಪಣೆ, ವಿದೇಶಾಂಗ ವ್ಯವಹಾರಗಳು, ರಾಜಕೀಯ, ಸಾಮಾಜಿಕ ಸೇರಿ ಎಲ್ಲಾ ಕ್ಷೇತ್ರದಲ್ಲಿಯೂ ಇತಿಹಾಸ ಪ್ರಭಾವ ಬೀರುತ್ತದೆ. ಈ ಎಲ್ಲಾ ಕಾರಣಗಳಿಂದ ಸತ್ಯಕ್ಕೆ ಹತ್ತಿರವಾದ ಇತಿಹಾಸದ ಮರು ದರ್ಶನ ಅಗತ್ಯವಿದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಲೇಖಕ ವಿಜಯ್ ಪೂಣಚ್ಚ ಅವರು ಮಾಡಿರುವ ಪ್ರಯತ್ನ ಅರ್ಥಪೂರ್ಣ’ ಎಂದು ಹೇಳಿದರು.

ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ‘ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ನಾವು ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿ ಸ್ಮರಿಸಿಕೊಳ್ಳುವ ಸ್ಥಿತಿ ಉಂಟಾಗಿರುವುದು ದುರಂತ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನ’ ಎಂದರು.

ಬಿಡುಗಡೆಯಾದ ಪುಸ್ತಕಗಳು

ಪುಸ್ತಕ: ರಾಜೇಂದ್ರನಾಮೆ ಮರು ಓದು
ಪುಟ: 310
ಬೆಲೆ: ₹900
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ

ಪುಸ್ತಕ: ಅಮರಸುಳ್ಯ ಸಂಗ್ರಾಮ 1837
ಪುಟ: 706
ಬೆಲೆ: ₹1600
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ

ಪುಸ್ತಕ: ಕಾಡುಮಕ್ಕಳ ಕೂಗು
ಪುಟ: 469
ಬೆಲೆ: ₹400‌
ಪ್ರಕಾಶಕರು: ವೇದಿಕೆ ಪ್ರಕಾಶನ

* ಮೂರು ಪುಸ್ತಕಗಳ ಲೇಖಕ: ವಿಜಯ್ ಪೂಣಚ್ಚ ತಂಬಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.