ಬೆಂಗಳೂರು: ‘ಅಭಿವ್ಯಕ್ತಿ ಎನ್ನುವುದು ನಿಯಂತ್ರಣ ರೇಖೆಗೆ ಒಳಪಟ್ಟಿದ್ದು, ನಮ್ಮ ವಿಚಾರಗಳೂ ಸೆನ್ಸಾರ್ಗೆ ಒಳಪಡುವ ಆತಂಕದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಲೇಖಕಿ ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು.
ಅಂಕಿತ ಪುಸ್ತಕ ಪ್ರಕಾಶನವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾಷೆ ಬಹಳ ಬಿಗಡಾಯಿಸಿದೆ. ಕೊಲ್ಲುವವನು ಹಾಗೂ ಸಾಯುವವನು ಒಂದೇ ಭಾಷೆ ಬಳಕೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ನಾಲಿಗೆಯ ಭಾಷೆಯನ್ನು ಯಾರೋ ಅಪಹರಿಸುವ ಆತಂಕ ಕಾಡಲಾರಂಭಿಸಿದೆ’ ಎಂದು ಹೇಳಿದರು.
‘ಭೂಮಿಯು ತನ್ನ ಸುತ್ತ ಹಾಗೂ ಅಕ್ಷಾಂಶಗಳ ಸುತ್ತಲೂ ಸುತ್ತಬೇಕು. ಅದೇ ರೀತಿ, ಹೆಣ್ಣು ಮನೆಯಲ್ಲಿ ಕೌಟುಂಬಿಕ ಹಾಗೂ ಹೊರ ಪ್ರಪಂಚದ ಸಂಘರ್ಷಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಸ್ಥಿತಿಯಿದೆ. ಪ್ರತಿಭಾ ಅವರು ಹೆಣ್ಣಿನ ಒಳಗುದಿಯನ್ನು ತಮ್ಮ ಕಾವ್ಯದಲ್ಲಿ ಅನಾವರಣ ಮಾಡುವ ಪ್ರಯತ್ನ ಮಾಡಿದ್ದಾರೆ’ ಎಂದರು.
ಸಾಹಿತಿ ಲಕ್ಷ್ಮೀಶ ತೋಳ್ಪಾಡಿ,‘ಬದುಕಬೇಕೆಂಬ ಹಂಬಲದಿಂದ ಸಾವಿನ ಕಡೆಗೆ ಸಾಗುತ್ತಿದ್ದೇವೆ. ನಾವು ವಿರುದ್ಧ
ದಿಕ್ಕಿನಲ್ಲಿ ಹೋಗುತ್ತಿದ್ದೇವೆ ಅನಿಸಿದರೂ ಬದುಕಿನ ಚಲನೆ ಬದಲಾಯಿಸಿಕೊಳ್ಳುವುದಿಲ್ಲ. ಪಶ್ಚಾತಾಪವೊಂದೇ ಪರಿಹಾರವಲ್ಲ. ನಾವು ಮಾಡಿದ ಪಾಪಗಳಿಗೆ ಪಶ್ಚಾತಾಪ ಪಟ್ಟರೆ ದೇವರು ಕ್ಷಮಿಸುತ್ತಾನೆ ಎಂದು ಭಾವಿಸುವುದು ಒಂದು ರೀತಿಯಲ್ಲಿ ಹಕ್ಕು ಪ್ರತಿಪಾದಿಸಿದಂತೆ’ಎಂದರು.
ಫಕೀರ್ ಮುಹಮ್ಮದ್ ಕಟ್ಪಾಡಿ, ‘ಸೂಫಿ ಚಿಂತನೆಗಳು ನಿರ್ದಿಷ್ಟವಾದ ಕೃತಿ ಅಥವಾ ಚಿಂತನೆಗಳಿಗೆ ಸೀಮಿತವಾಗಿಲ್ಲ. ಒಬ್ಬೊಬ್ಬರೂ ಇದನ್ನು ಒಂದೊಂದು ರೀತಿಯಲ್ಲಿ ಹೇಳುತ್ತಾರೆ. ಆದರೆ, ಇಲ್ಲಿ ಘರ್ಷಣೆ ಇರುವುದಿಲ್ಲ. ಬೈಬಲ್, ಕುರಾನ್, ಭಗವದ್ಗೀತೆ, ಗುರುಗ್ರಂಥ ಸಾಹೇಬ್ನಂತಹ ಧರ್ಮ ಗ್ರಂಥಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ವಿವರಿಸಿದರೂ ಅವುಗಳ ಆಶಯ ಒಂದೇ’ ಎಂದು ತಿಳಿಸಿದರು.
ಪುಸ್ತಕ ಪರಿಚಯ
ಪುಸ್ತಕ: ಸೂಫಿ ಅಧ್ಯಾತ್ಮ ಚಿಂತನೆಗಳು
ಲೇಖಕ: ಫಕೀರ್ ಮುಹಮ್ಮದ್ ಕಟ್ಪಾಡಿ
ಪುಟಗಳು: 312
ಬೆಲೆ: ₹ 330
**
ಪುಸ್ತಕ: ಕೌಬಾಯ್ಸ್ ಮತ್ತು ಕಾಮ ಪುರಾಣ
ಲೇಖಕಿ: ಪ್ರತಿಭಾ ನಂದಕುಮಾರ್
ಪುಟಗಳು: 104
ಬೆಲೆ: ₹ 120
**
ಪುಸ್ತಕ: ಪ್ರತಿಭಾ ಕಾವ್ಯ
ಲೇಖಕಿ: ಪ್ರತಿಭಾ ನಂದಕುಮಾರ್
ಪುಟಗಳು: 776
ಬೆಲೆ: ₹ 650
**
ಪುಸ್ತಕ: ಜಾಮೂನು ಪದ್ಯಗಳು
ಲೇಖಕ: ರಘುನಾಥ ಚ.ಹ.
ಪುಟಗಳು: 55
ಬೆಲೆ: ₹ 80
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.