ಬೆಂಗಳೂರು: ಮಳೆಗೆ ರಸ್ತೆ ಕುಸಿದ ಕಾರಣ ಮುಚ್ಚಲಾಗಿರುವ ಬೋರ್ ಬ್ಯಾಂಕ್ ರಸ್ತೆಯು ಮೂರು ದಿನಗಳಲ್ಲಿ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಳೇನ ಅಗ್ರಹಾರ–ನಾಗವಾರವನ್ನು ಸಂಪರ್ಕಿಸುವ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಪಾಟರಿ ಟೌನ್ ಮೆಟ್ರೊ ನಿಲ್ದಾಣ ಕಾಮಗಾರಿಗಾಗಿ ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆ ಬುಧವಾರ ಮಳೆಗೆ ಕುಸಿದು ಬಿದ್ದಿತ್ತು. ಜೊತೆಗೆ ಬೋರ್ ಬ್ಯಾಂಕ್ ರಸ್ತೆಯ ಮಧ್ಯದಲ್ಲಿಯೇ ಕುಸಿದು 5 ಅಡಿಗಿಂತಲೂ ಆಳವಾದ ಗುಂಡಿ ಬಿದ್ದಿತ್ತು. ಬೋರ್ ಬ್ಯಾಂಕ್ ರಸ್ತೆ ಸಂಚಾರವನ್ನು ಮುಚ್ಚಿ, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮಾಡಲಾಗಿತ್ತು.
‘ಒಂದು ಕಡೆಯಿಂದ ಪಾಟರಿ ಟೌನ್ ಮೆಟ್ರೊ ನಿಲ್ದಾಣಕ್ಕಾಗಿ ಕಾಮಗಾರಿ ನಡೆಯುತ್ತಿತ್ತು. ಇನ್ನೊಂದು ಕಡೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇರಲಿಲ್ಲ. ಇದರಿಂದ ರಸ್ತೆಯಲ್ಲಿಯೇ ನೀರು ನಿಂತು ಮಣ್ಣು ಕುಸಿದಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗುಂಡಿ ತುಂಬುವ ಕೆಲಸ ಆಗಿದೆ. ಇನ್ನೆರಡು ದಿನಗಳಲ್ಲಿ ರಸ್ತೆ ಸರಿಯಾಗಲಿದೆ. ಆನಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.