ADVERTISEMENT

ಜ್ಯೋತಿಷಿ ಪುತ್ರನ ಅಪಹರಿಸಿ ₹5 ಲಕ್ಷಕ್ಕೆ ಬೇಡಿಕೆ: ಬಂಧನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 3:14 IST
Last Updated 10 ಆಗಸ್ಟ್ 2023, 3:14 IST
   

ಬೆಂಗಳೂರು: ನಗರದಲ್ಲಿ ಸಿನಿಮೀಯ ರೀತಿಯಲ್ಲಿ ಜ್ಯೋತಿಷಿಯ ಪುತ್ರನನ್ನು ಅಪಹರಿಸಿ, ₹ 5 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಯನ್ನು ಎಚ್ಎಸ್‌ಆರ್‌ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿಷಿ ಮಣಿವಾಸಕನ್‌ ಅವರ 18 ವರ್ಷದ ಪುತ್ರನನ್ನು ತುಮಕೂರಿನ ಅರ್ಜುನ್‌ ಅಪಹರಣ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಎಂದು ಪೊಲೀಸರು ಹೇಳಿದರು.

‘ನಗರದ ಪಿಜಿಯೊಂದರಲ್ಲಿ ಆರೋಪಿ ಅರ್ಜುನ್‌ ನೆಲೆಸಿದ್ದ. ಸಾಧನೆ ಮಾಡಬೇಕೆಂದು ಬೆಂಗಳೂರಿಗೆ ಬಂದಿರುವುದಾಗಿ ಹೇಳಿಕೊಳ್ಳುತ್ತಿದ್ದ. ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ ದುಡ್ಡಿಗಾಗಿ ಯಾರನ್ನಾದರೂ ಅಪಹರಣ ಮಾಡಬೇಕೆಂದು ಯೋಜನೆ ರೂಪಿಸಿದ್ದ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಜ್ಯೋತಿಷಿಯ ಪುತ್ರ ಮೆಡಿಕಲ್ ಸೀಟಿಗಾಗಿ ಕೋಚಿಂಗ್‌ ತೆರಳುತ್ತಿರುವುದನ್ನು ಆರೋಪಿ ಗಮನಿಸಿದ್ದ. ಆರೋಪಿಗೆ ಸಿನಿಮಾ ವೀಕ್ಷಣೆ ಹವ್ಯಾಸವಿತ್ತು. ಸಿನಿಮಾದಿಂದ ಪ್ರೇರಣೆಗೊಂಡು ಅಪಹರಣಕ್ಕೆ ಸಿನಿಮಾದಲ್ಲಿ ಬರುವ ದೃಶ್ಯಾವಳಿಯಂತೆಯೇ ಯೋಜನೆ ರೂಪಿಸಿದ್ದ. ಡ್ರಾಪ್‌ ಕೇಳುವ ನೆಪದಲ್ಲಿ ಕಾರನ್ನು ಅಡ್ಡಗಟ್ಟಿದ್ದ ಆರೋಪಿ ಯುವಕ ಪುತ್ರನ ಹಣೆಗೆ ಗನ್‌ಯಿಟ್ಟು ಅಪಹರಣ ಮಾಡಿದ್ದ. ಬಳಿಕ ಜ್ಯೋತಿಷಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ. ಮೊಬೈಲ್‌ ಲೊಕೇಶನ್ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಹೆದರಿಸಲು ಬಳಸಿದ್ದ ಗನ್‌ ಡಮ್ಮಿ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.