ಬೆಂಗಳೂರು: ಬಿಬಿಎಂಪಿ ಬಜೆಟ್ಗೂ ಮುನ್ನವೇ ರಾಜ್ಯ ಬಜೆಟ್ನಲ್ಲೂ ಪ್ರಕಟವಾಗಿದ್ದ, ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗವಾದ ಸಾವಿರಾರು ಕೋಟಿ ವೆಚ್ಚದ ‘ಸುರಂಗ ರಸ್ತೆ’ ಯೋಜನೆ, ವಿಸ್ತೃತ ಯೋಜನಾ ವರದಿಯಿಂದಲೇ (ಡಿಪಿಆರ್) ಇನ್ನೂ ಮೇಲೆದ್ದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದ ತಿಂಗಳಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ‘ನಗರದಲ್ಲಿ ಸುಗಮ ಸಂಚಾರ ಸಾಧ್ಯವಾಗಬೇಕಾದರೆ ಅದಕ್ಕೆ ‘ಸುರಂಗ ರಸ್ತೆ’ಯೊಂದೇ ಪರಿಹಾರ, ಅದನ್ನು ಮಾಡಿಯೇ ಸಿದ್ಧ’ ಎಂದು ಹೇಳಿದ್ದರು. ಆದರೆ, ಹೀಗೆ ಹೇಳಿ ಒಂದೂವರೆ ವರ್ಷವಾದರೂ ಯೋಜನೆ ಡಿಪಿಆರ್ನಿಂದಲೇ ಹೊರಬಂದಿಲ್ಲ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು, ಹೆಬ್ಬಾಳದಿಂದ ರೇಷ್ಮೆ ಮಂಡಳಿಯವರೆಗಿನ ‘ಸುರಂಗ ರಸ್ತೆ’ ಯೋಜನೆಗೆ 2024ರ ಸೆಪ್ಟೆಂಬರ್, ಡಿಸೆಂಬರ್ ಹಾಗೂ 2025ರ ಫೆಬ್ರುವರಿ ಅಂತ್ಯದೊಳಗೆ ಟೆಂಡರ್ ಕರೆಯಲಾಗುತ್ತದೆ ಎಂದು ಗಡುವುಗಳನ್ನು ನೀಡಿದ್ದರು. ಆದರೆ, ಯೋಜನೆ ನೇತೃತ್ವ ವಹಿಸಿಕೊಂಡಿರುವ ಬಿಬಿಎಂಪಿಯ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರು ಡಿಪಿಆರ್ ಅನ್ನೇ ಇನ್ನೂ ಅಂತಿಮಗೊಳಿಸಿಲ್ಲ. ಡಿಪಿಆರ್ ಸಿದ್ಧಪಡಿಸಿದ್ದ ಸಂಸ್ಥೆಯೊಂದು ಮುಂಬೈ ಯೋಜನೆಯೊಂದಕ್ಕೆ ಸಿದ್ಧಪಡಿಸಿದ್ದ ಹಾಳೆಗಳನ್ನೂ ಸೇರಿಸಿ, ಪಾಲಿಕೆಗೆ ನೀಡಿತ್ತು. ಅದು ‘ಒಂದು ಹಾಳೆ ಅಷ್ಟೆ’ ಎಂದು ಎಂಜಿನಿಯರ್ಗಳು ಸಮಜಾಯಿಷಿಯನ್ನೂ ನೀಡಿದ್ದರು.
‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿಯ ಬಿಬಿಎಂಪಿ ಬಜೆಟ್ನಲ್ಲಿ ‘ಸುಗಮ ಸಂಚಾರ ಬೆಂಗಳೂರು’ಗೆ ಪ್ರಥಮ ಆದ್ಯತೆ ನೀಡಲಾಗಿತ್ತು. ₹800 ಕೋಟಿ ಮೀಸಲಿಟ್ಟು, ಸಂಚಾರ ಸುಗಮಗೊಳಿಸಲು ಮಾರ್ಗೋಪಾಯಗಳನ್ನು ಪಡೆದುಕೊಳ್ಳಲು ನಿರ್ಧರಿಸಲಾಗಿತ್ತು. ‘ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆ ಯೋಜನೆ’ಯಡಿ ಸುರಂಗ ರಸ್ತೆಗಳೂ ಸೇರಿದಂತೆ 16 ಮೇಲ್ಸೇತುವೆಗಳನ್ನು ನಿರ್ಮಿಸುವ ₹54 ಸಾವಿರ ಕೋಟಿಗಳ ವೆಚ್ಚದ ಕಾರ್ಯಸಾಧ್ಯತಾ ವರದಿಯನ್ನು ಬಿಬಿಎಂಪಿ ಪಡೆದುಕೊಂಡಿದ್ದಷ್ಟೇ ಈವರೆಗಿನ ಸಾಧನೆ. ವಿವರವಾದ ವರದಿ ನೀಡಲಾಗಿದ್ದರೂ, ಮತ್ತೆ ಡಿಪಿಆರ್ ಎಂದು ಹಣವೆಚ್ಚದ ಜೊತೆಗೆ ಸಮಯವನ್ನೂ ಬಿಬಿಎಂಪಿ ಎಂಜಿನಿಯರ್ಗಳು ವ್ಯರ್ಥ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.
ಗುಲಾಬಿ ಕೊಠಡಿ: ‘ಆಕರ್ಷಕ ಬೆಂಗಳೂರು’ ಪರಿಕಲ್ಪನೆಯಡಿ ಮಹಿಳೆಯರಿಗೆ ಮಾಲ್, ಬಸ್ ನಿಲ್ದಾಣಗಳಲ್ಲಿ ‘ಗುಲಾಬಿ ಕೊಠಡಿ’ ನಿರ್ಮಿಸಿ, ನ್ಯಾಪ್ಕಿನ್ ಹಾಗೂ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಡುವುದಾಗಿ ಬಿಬಿಎಂಪಿ ಬಜೆಟ್ನಲ್ಲಿ ಹೇಳಲಾಗಿತ್ತು. ಬಣ್ಣಬಣ್ಣದಲ್ಲಿ ಮುದ್ರಿಸಲಾಗಿದ್ದ ಬಜೆಟ್ ಪುಸ್ತಕದಲ್ಲೇ ಗುಲಾಬಿ ಬಣ್ಣದ ಕೊಠಡಿಗಳು ಉಳಿದುಕೊಂಡಿವೆ.
ಮೇಲ್ಸೇತುವೆ, ಕೆಳಸೇತುವೆ, ರಸ್ತೆ ಜಂಕ್ಷನ್ಗಳಲ್ಲಿ ವಿದ್ಯುತ್ ದೀಪ ಅಳವಡಿಸಿ, ಆಕರ್ಷಕಗೊಳಿಸುವುದಾಗಿ ಹೇಳಲಾಗಿತ್ತು. ‘ಇನ್ವೆಸ್ಟ್ ಕರ್ನಾಟಕ‘, ‘ಏರೊ–ಇಂಡಿಯಾ ವೈಮಾನಿಕ ಪ್ರದರ್ಶನ’ದ ಸಂದರ್ಭದಲ್ಲಿ ಹಡ್ಸನ್ ವೃತ್ತದಲ್ಲಿ ಮಾತ್ರ ಎಲ್ಇಡಿ ದೀಪಗಳು ಬೆಳಗಿದವು. ನಂತರ ಅವೂ ಕಾಣೆಯಾದವು.
ಬೆಂಗಳೂರು ನಗರಕ್ಕೆ ಆಕರ್ಷಕ ತಾಣವಾಗುವ ವಿಶ್ವದರ್ಜೆಯ 250 ಮೀಟರ್ ಎತ್ತರದ ‘ಸ್ಕೈಡೆಕ್’ ಅನ್ನು ನಿರ್ಮಿಸುವುದಾಗಿ ಬಿಬಿಎಂಪಿ ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ಬಜೆಟ್ಗೂ ಮುನ್ನವೇ ಇದರ ಪ್ರಸ್ತಾಪವಿದ್ದರೂ ‘ಸ್ಕೈಡೆಕ್’ ನಿರ್ಮಿಸಲು ಸ್ಥಳವನ್ನೇ ಎಂಜಿನಿಯರ್ಗಳು ಗುರುತಿಸಲು ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ನಿಗದಿಯಾಗುವುದು ವಿಳಂಬವಾಗಿರುವುದರಿಂದ ‘ಸ್ಕೈಡೆಕ್’ಗೆ ದಕ್ಷಿಣ ಹಾಗೂ ಉತ್ತರದಲ್ಲಿ ಗುರುತಿಸಲಾಗಿದ್ದ ಸ್ಥಳವನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಪ್ರತಿಯೊಂದು ಯೋಜನೆಯ ವಿಳಂಬಕ್ಕೂ ‘ಸಿದ್ಧ ಸಬೂಬು’ ತಯಾರಿಸಿಟ್ಟುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಹಲವು ವರ್ಷಗಳಿಂದ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗಳ ವಿಳಂಬಕ್ಕೂ ಕಾರಣರಾಗಿದ್ದಾರೆ ಎಂದು ನಾಗರಿಕರು ದೂರುತ್ತಲೇ ಇದ್ದಾರೆ.
‘ಬಜೆಟ್ ಅನ್ನುವುದು ಒಂದು ವರ್ಷದಲ್ಲಿ ನಾವು ಕೈಗೊಳ್ಳುವ ಯೋಜನೆಗಳ ಕೈಪಿಡಿ. ಮೆಗಾ ಯೋಜನೆಗಳು ಒಂದೇ ವರ್ಷದಲ್ಲಿ ಪೂರ್ಣಗೊಳ್ಳುವುದಿಲ್ಲ. ಆರಂಭಿಕ ವೆಚ್ಚವನ್ನು ಮೊದಲ ವರ್ಷದಲ್ಲಿ ತೋರಿಸಿದರೆ ಮುಂದಿನ ಬಜೆಟ್ಗಳಲ್ಲಿ ಅವುಗಳಿಗೆ ವಿನಿಯೋಗಿಸುವ ಹಣವನ್ನು ಪ್ರಕಟಿಸಲಾಗುತ್ತದೆ. ಸುಮಾರು ಐದು ವರ್ಷಗಳು ನಡೆಯುವ ಬೃಹತ್ ಯೋಜನೆಗಳು ಈ ವರ್ಷವೇ ಮುಗಿಯಬೇಕು ಎಂದರೆ ಸಾಧ್ಯವಾಗುವುದಿಲ್ಲ’ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.