ಬೆಂಗಳೂರು: ರಸ್ತೆ ಅತಿಕ್ರಮಣಕ್ಕೆ ಸಂಬಂಧಿಸಿದ ದೂರಿನ ವಿಚಾರಣೆ ಮುಕ್ತಾಯಗೊಳಿಸಲು ಫಿರ್ಯಾದಿಯಿಂದ ಲಂಚದ ಹಣ ಸ್ವೀಕರಿಸುತ್ತಿದ್ದ ಬೆಂಗಳೂರು ಮಹಾನಗರಪಾಲಿಕೆ ಕಾರ್ಯಪಡೆಯ ಸಬ್ಇನ್ಸ್ಪೆಕ್ಟರ್ ವಿ. ಶಿವಕುಮಾರ್, ಅವರ ಸಹಾಯಕ ಚೇತನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿಯೊಬ್ಬರು ರಸ್ತೆ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಕೆಲವರು ಬಿಎಂಟಿಎಫ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರನ್ನು ಸ್ವೀಕರಿಸಿದ ಶಿವಕುಮಾರ್ ವಿಚಾರಣೆ ಮುಕ್ತಾಯಗೊಳಿಸಲು ಫಿರ್ಯಾದಿಯಿಂದ ₹ 70 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ತಮ್ಮ ಸಹಾಯಕ ಚೇತನ್ ಮುಖಾಂತರ ₹ 20 ಸಾವಿರ ಪಡೆದಿದ್ದರು.
ಉಳಿದ ₹ 50 ಸಾವಿರವನ್ನು ಶಿವಕುಮಾರ್ ಬುಧವಾರ ಅರ್ಜಿದಾರರಿಂದ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದರು. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.