ADVERTISEMENT

ಫುಡ್‌ ಕ್ಲಸ್ಟರ್‌: ಹೂಡಿಕೆಗೆ ಸ್ವಿಸ್‌ ಕಂಪನಿ ಒಲವು

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 22:08 IST
Last Updated 21 ಜನವರಿ 2020, 22:08 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದಾವೋಸ್‌ನ ಕರ್ನಾಟಕ ಪೆವಿಲಿಯನ್‌ನಲ್ಲಿ ರಿನ್ಯೂ ಪವರ್‌ ಲಿಮಿಟೆಡ್‌ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಮಂತ್‌ ಸಿನ್ಹಾ ಅವರೊಂದಿಗೆ ಚರ್ಚಿಸಿದರು. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಇದ್ದರು.
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದಾವೋಸ್‌ನ ಕರ್ನಾಟಕ ಪೆವಿಲಿಯನ್‌ನಲ್ಲಿ ರಿನ್ಯೂ ಪವರ್‌ ಲಿಮಿಟೆಡ್‌ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಮಂತ್‌ ಸಿನ್ಹಾ ಅವರೊಂದಿಗೆ ಚರ್ಚಿಸಿದರು. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಇದ್ದರು.   

ಬೆಂಗಳೂರು: ‘ರಾಜ್ಯದಲ್ಲಿ ಕೃಷಿ ಆಧಾರಿತ ಉದ್ಯಮಗಳ ಸ್ಥಾಪನೆಗೆ ಉತ್ತಮ ಅವಕಾಶವಿದ್ದು, ಈ ಕ್ಷೇತದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಮಂಗಳವಾರ ವಿವಿಧ ಹೂಡಿಕೆದಾರರು ಮತ್ತು ಉದ್ಯಮಿಗಳ ಜತೆ ಅವರು ಚರ್ಚೆ ನಡೆಸಿದರು.

ರೈತರ ಆತ್ಮಹತ್ಯೆ ಪ್ರವೃತ್ತಿ ತಡೆಯುವ ನಿಟ್ಟಿನಲ್ಲಿ ಕೃಷಿ ಆಧಾರಿತ ಆರ್ಥಿಕತೆ ಸುಧಾರಿಸುವ ಅಗತ್ಯವಿದೆ. ಇದಕ್ಕಾಗಿ ಯೋಜನೆಗಳನ್ನು ರೂಪಿಸಲು ಸಾಧ್ಯವೇ ಎಂದು ಸ್ವಿಸ್‌ ಮೂಲದ ‘2000 ವ್ಯಾಟ್‌’ ಕಂಪನಿ ಪ್ರತಿನಿಧಿಗಳನ್ನು ಯಡಿಯೂರಪ್ಪ ಪ್ರಶ್ನಿಸಿದರು.

ADVERTISEMENT

‘ಕರ್ನಾಟಕದ ಕೃಷಿ ಅಗತ್ಯಗಳಿಗೆ ಪೂರಕವಾದ ತಂತ್ರಜ್ಞಾನ ತಮ್ಮ ಬಳಿ ಇದ್ದು, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಲು ಪೂರಕವಾದ ಫುಡ್‌ ಕ್ಲಸ್ಟರ್‌ಗಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವುದಾಗಿ’ ಕಂಪನಿ ಪ್ರತಿನಿಧಿಗಳು ವಿವರಿಸಿದರು.

2000 ವ್ಯಾಟ್‌ ಕಂಪನಿಯ ಫುಡ್‌ ಕ್ಲಸ್ಟರ್‌ಗಳ ಅಭಿವೃದ್ಧಿ ಯೋಜನೆ ಕುರಿತು ವಿಶೇಷ ಆಸಕ್ತಿ ತೋರಿದ ಮುಖ್ಯಮಂತ್ರಿಯವರು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಇಂತಹ ಯೋಜನೆಗಳಿಂದ ಕೃಷಿ ಆರ್ಥಿಕತೆ ಉತ್ತಮಗೊಳ್ಳಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.