ADVERTISEMENT

ಮೂಲಸೌಕರ್ಯ, ುದ್ಯೋಗಕ್ಕೆ ಸಿಗದ ಆದ್ಯತೆ

ಕೇಂದ್ರ ಬಜೆಟ್‌: ಆರ್ಥಿಕ ತಜ್ಞರಿಂದ ಸಂವಾದ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 19:32 IST
Last Updated 3 ಫೆಬ್ರುವರಿ 2020, 19:32 IST
ಸಂವಾದದಲ್ಲಿ ಪ್ರಶಾಂತ್‌ ಪ್ರಕಾಶ್‌, ಎಸ್‌.ಎಸ್‌. ನಾಗಾನಂದ, ಆರ್‌.ಕೆ. ಮಿಶ್ರಾ, ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಇದ್ದಾರೆ - ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಪ್ರಶಾಂತ್‌ ಪ್ರಕಾಶ್‌, ಎಸ್‌.ಎಸ್‌. ನಾಗಾನಂದ, ಆರ್‌.ಕೆ. ಮಿಶ್ರಾ, ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಇದ್ದಾರೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೇಂದ್ರ ಸರ್ಕಾರದ ಪ್ರಸಕ್ತ ಬಜೆಟ್‌ನಲ್ಲಿ ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್‌ ಕುರಿತು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಆರ್ಥಿಕ ತಜ್ಞ ಆರ್.ಕೆ. ಮಿಶ್ರಾ, ‘ದೇಶ ಸದ್ಯ ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳೆಂದರೆ ನಿರುದ್ಯೋಗ, ಮೂಲಸೌಕರ್ಯ ಕೊರತೆ ಮತ್ತು ವಸತಿ ಸಮಸ್ಯೆ. ಆದರೆ, ಈ ವಲಯಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ. ಬಜೆಟ್‌ನ ಒಟ್ಟು ಗಾತ್ರದಲ್ಲಿ ನಗರಾಭಿವೃದ್ಧಿಗೆ ಶೇ 13.5ರಷ್ಟು ಅನು
ದಾನ ಮೀಸಲಾಗಿಟ್ಟಿದ್ದರೂ ಅದು ವಿವಿಧ ವಿಭಾಗಗಳಲ್ಲಿ ಹಂಚಿಹೋಗಿದೆ’ ಎಂದರು.

‘ಬಜೆಟ್‌ನಲ್ಲಿ ಕೃಷಿ, ಸಣ್ಣ ನೀರಾವರಿ ಮತ್ತು ಅದಕ್ಕೆ ಸಂಬಂಧಿಸಿದ ವಲಯ
ಗಳಿಗೆ ₹1.60 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಕೃಷಿಯಿಂದ ಹೊರಗಿದ್ದಾರೆ. ಕೃಷಿಗೆ ಹಂಚಿಕೆಯಾಗುವ ಅನುದಾನ ಬಳಕೆಯಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ನ ಹೊಲ
ಗಳಲ್ಲಿ ಮಾತ್ರ ಓಡಾಡದೆ, ಇತರ ರಾಜ್ಯಗಳ ಹೊಲಗಳಿಗೆ ಭೇಟಿ ನೀಡಿ, ನೇರವಾಗಿ ರೈತರ ಬಳಿ
ಮಾತನಾಡಿದರೆ ಸಮಸ್ಯೆ ತಿಳಿಯುತ್ತದೆ’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ ಆಹಾರದ ಬೆಲೆ ಜಗತ್ತಿನಲ್ಲಿಯೇ ಅತಿ ಕಡಿಮೆಯಾಗಿದೆ. ಹೀಗಾಗಿ, ನಮ್ಮ ರೈತರು ಕಡು ಬಡವರಾಗಿದ್ದಾರೆ. ಎಪಿಎಂಸಿಗಳಲ್ಲಿ ಮೊದಲು ಸುಧಾರಣೆ ತರಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಆರ್ಥಿಕ ತಜ್ಞ ಪ್ರಶಾಂತ್ ಪ್ರಕಾಶ್‌, ‘ಎಪಿಎಂಸಿ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ರಾಜ್ಯದಲ್ಲಿ ಎಪಿಎಂಸಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಕೃಷಿ ಕ್ಷೇತ್ರ ಅಭಿವೃದ್ಧಿ ಆಗಬೇಕೆಂದರೆ ಅವುಗಳಿಗೆ ಸಂಬಂಧಿಸಿದ ನವೋದ್ಯಮಗಳಿಗೆ ಉತ್ತೇಜನ ನೀಡಬೇಕು’ ಎಂದರು.

ಎಸ್‌ಬಿಐ ಮುಖ್ಯ ಆರ್ಥಿಕ ಸಲಹೆಗಾರ ಡಾ.ಸೌಮ್ಯಕಾಂತಿ ಘೋಷ್,‘ದೇಶದಲ್ಲಿ 2018ರಲ್ಲಿ 89 ಲಕ್ಷ ಹಾಗೂ 2019ರ ಅಕ್ಟೋಬರ್‌ ವೇಳೆಗೆ 73 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆದರೆ, ಇವು ಗುಣಮಟ್ಟದ್ದಾಗಿರದೇ ಇರುವುದೇ ಸಮಸ್ಯೆ. ಬಿ.ಎ, ಬಿ.ಎಸ್‌ಸಿ ಹಾಗೂ ಬಿ.ಕಾಂನಂತಹ ಕೋರ್ಸ್‌ಗಳಿಗೂ, ಉದ್ಯೋಗ ಸೃಷ್ಟಿಗೂ ಸಂಬಂಧವೇ ಇಲ್ಲದಂತಾಗಿದೆ’ ಎಂದರು.

‘ಉನ್ನತ ಶಿಕ್ಷಣಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕಾದ ಅನಿವಾರ್ಯ ಇದೆ. ಉನ್ನತ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು ಕಷ್ಟ’ ಎಂದರು.

‘ಎಂಜಿನಿಯರಿಂಗ್‌ನಲ್ಲಿ ಇಂಟರ್ನ್‌ಶಿಪ್‌ ಪ್ರಾರಂಭಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹ ಕ್ರಮ’ ಎಂದರು.

ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಸರ್ವಿಸಸ್‌ನ ಮುಖ್ಯಸ್ಥ ಟಿ.ವಿ. ಮೋಹನ್‌ದಾಸ್‌ ಪೈ, ಲೆಕ್ಕಪರಿಶೋಧಕ ಪದಂಚಂದ್‌ ಖಿಂಚ ಸಂವಾದ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.